
ವಿಜಯಪುರ: ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನಗೊಳಿಸುವ ಗುರಿ ಹೊಂದಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.
ನಗರದ ಸುಕೂನ್ ಬಡಾವಣೆಯ ಲೇಖಕ ರಾಮಕುಮಾರ ಅವರ ಮನೆಯಲ್ಲಿ ಬುಧವಾರ ‘ಮನೆಗೊಂದು ಗ್ರಂಥಾಲಯ’ದ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪುಸ್ತಕಗಳು ಮಾನವ ಜನಾಂಗದ ಆಸ್ತಿಯಾಗಬೇಕು. ಪ್ರತಿ ಮನೆಯಲ್ಲಿ ದೇವರ ಪೂಜಾ ಕೋಣೆ ಇರುವಂತೆ ಮನೆಗೊಂದು ಗ್ರಂಥಾಲಯವಿದ್ದರೆ ಆ ಮನೆ ಜ್ಞಾನದ ಸಂಪತ್ತಿನಿಂದ ಕೂಡುತ್ತದೆ. ಯುವ ಜನಾಂಗಕ್ಕೆ ದಾರಿದೀಪವಾಗುತ್ತದೆ. ಪುಸ್ತಕ ಓದುವ ಹವ್ಯಾಸ ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ‘ವಿಜಯಪುರ ಜಿಲ್ಲೆ ಸಾಹಿತ್ಯ ಕ್ಷೇತ್ರದ ತವರೂರು. ಅಣ್ಣ ಬಸವಣ್ಣ ತನ್ನ ಜ್ಞಾನದಿಂದ ಜಗತ್ತಿಗೆ ಬೆಳಕನ್ನು ನೀಡಿದ್ದಾರೆ. ಹಲಸಂಗಿ ಗೆಳೆಯರ ಬಳಗದವರು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಸಮಿತಿಯ ಸದಸ್ಯ ಎ.ಎಚ್. ಕೊಳಮಲಿ ಮಾತನಾಡಿ, ‘ಪುಸ್ತಕಗಳ ಓದುನಿಂದ ಬೌದ್ಧಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ’ ಎಂದು ಹೇಳಿದರು.
ಸಂಚಾಲಕ ಶಂಕರ ಬೈಚಬಾಳ, ಪ್ರಾಧಿಕಾರದ ಶ್ರೀನಿವಾಸ ಕರಿಯಪ್ಪ, ಶ್ರೀರಾಮಕುಮಾರ, ರವಿಕುಮಾರ, ಲಕ್ಷ್ಮಣ ಲಮಾಣಿ, ರಾಜಶೇಖರ ಕೌಲಗಿ, ಸಿದ್ದರಾಮ ಬಿರಾದಾರ, ರಾವಸಾಬ್ ಬಿರಾದಾರ, ಡಿ. ಜೋಸೆಫ್, ಸಿದ್ದಣ್ಣ ಸಾತಲಗಾಂವ, ಟಿ.ಆರ್. ಹಾವಿನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.