ವಿಜಯಪುರ: ಕೇಂದ್ರ ಜಲ ಶಕ್ತಿ ತಂಡದ ನೋಡಲ್ ಅಧಿಕಾರಿ ವಿಕಾಸ್ ಡೋಗ್ರಾ ಹಾಗೂ ಅನಾಮಿಕ ಐಚ್ ತಾಂತ್ರಿಕ ಅಧಿಕಾರಿಗಳು ಶುಕ್ರವಾರ ವಿಜಯಪುರ ಹಾಗೂ ಇಂಡಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ವಿಜಯಪುರ ತಾಲ್ಲೂಕಿನ ಭೂತನಾಳ ಗ್ರಾಮದ ಅರಣ್ಯ ಇಲಾಖೆಯ ನರ್ಸರಿ, ತಿಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರು ಪೂರೈಕೆಯ ನಳಗಳ ಪರಿಶೀಲನೆ, ಡೋಮನಾಳ ಗ್ರಾಮದ ಗುಡ್ಡದ ಅರಣ್ಯ ವಲಯದ ಕಾಮಗಾರಿಗಳನ್ನು ಪರಿಶೀಲಿಸಿದರು.
ಇಂಡಿ ತಾಲ್ಲೂಕಿನ ಬಸನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸನಾಳ ಗ್ರಾಮದ ಬೋರ್ವೆಲ್ ರಿಚಾರ್ಜ್ ಫಿಟ್ ಕಾಮಗಾರಿ ಪರಿಶೀಲಿಸಿದರು. ರಿಚಾರ್ಜ್ ಫಿಟ್ ಕಾಮಗಾರಿಯ ವಿಸ್ತೀರ್ಣ, ಆಯವ್ಯಯ ನಿರ್ವಹಣೆ ಕುರಿತು ತಾಂತ್ರಿಕ ಸಹಾಯಕರೊಂದಿಗೆ ಚರ್ಚಿಸಿದರು. ಕ್ಯಾತನಕೇರಿಯ ಅಮೃತ ಸರೋವರ, ನೀರಿನ ಸಂಗ್ರಹಣೆ, ಸುತ್ತಳತೆ, ಸರೋವರದಿಂದ ಗ್ರಾಮಸ್ಥರಿಗೆ ದೊರೆಯುವ ಅನುಕೂಲತೆಗಳ ಕುರಿತು ಮಾಹಿತಿ ಪಡೆದರು.
ಇಂಡಿ ತಾಲ್ಲೂಕಿನ ಝಳಕಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಷ್ಠಾನಗೊಂಡ ಅಬ್ಸರ್ವೇಷನ್ ಬೋರ್ವೆಲ್ ಕಾಮಗಾರಿ, ನೀರಿನ ಮಟ್ಟ ಸೇರಿದಂತೆ ವಿವಿಧ ಮಾಹಿತಿ ಪಡೆದರು. ಮಳೆ ನೀರು ಕೊಯ್ಲು ಕಾಮಗಾರಿ ವೀಕ್ಷಿಸಿದರು.
ನಿಂಬಾಳ ಕೆ.ಡಿ ಗ್ರಾಮ, ಸಾವಳಸಂಗ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಅಮೃತ ಸರೋವರ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಡಿ ನಿರ್ಮಿಸಿದ ನೆಡುತೋಪು ಕಾಮಗಾರಿ ಪರಿಶೀಲಿಸಿದರು.
ಇಂಡಿ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಚಡಚಣ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಎಡಿಪಿಸಿ ಪೃಥ್ವಿರಾಜ್ ಪಾಟೀಲ, ಖಾಸಿಮಸಾಬ ಮಸಳಿ, ಮಹಾಂತೇಶ ಹೊಗೋಡಿ, ಮಂಜುಳಾ ಘಂಟಿ, ರುದ್ರವಾಡಿ, ಸಾಹಿಲ್ ದನಶೆಟ್ಟಿ, ಪರಶುರಾಮ ಶಹಾಪುರ, ರಾಘವೇಂದ್ರ ಭಜಂತ್ರಿ, ವಿನೋದ್ ಸಜ್ಜನ, ರಾಮಗೌಡ ಸರಬಡಗಿ, ಮಲ್ಲಿಕಾರ್ಜುನ್ ಡೊಳ್ಳಿ, ಸಿದ್ದು ಲೋಣಿ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.