ಇಂಡಿ: ಪ್ರತಿಯೊಬ್ಬರೂ ಜ್ಞಾನಿಗಳಾಗಬೇಕೇ ಹೊರತು ಅಜ್ಞಾನಿಗಳಾಗಬಾರದು. ಚನ್ನಬಸವಣ್ಣನವರ ವಚನಗಳನ್ನು ಓದುತ್ತಿದ್ದರೆ ಉತ್ತಮ ಸಂಸ್ಕಾರಗಳು ಒಡಮೂಡಿ, ಉತ್ತಮ ವ್ಯಕ್ತಿತ್ವ ಅರಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಂಶೋಧಕ ಡಿ. ಎನ್. ಅಕ್ಕಿ ಹೇಳಿದರು.
ಅವರು ಗುರುವಾರ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಕದಳಿ ವೇದಿಕೆ ಯುವ ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸದಾಚಾರ, ಸದ್ವಿಚಾರಗಳನ್ನು ತಿಳಿಯುವುದು, ಸತ್ಯವನ್ನೇ ನುಡಿಯಬೇಕು, ಹಿಂಸೆ ಮಾಡಬಾರದು, ಪರೋಪಕಾರ ಬುದ್ಧಿ ಇರಬೇಕು, ಕಾಯಕ ಶ್ರದ್ಧೆ ಬೆಳೆಸಿಕೊಳ್ಳಬೇಕು ಎಂಬ ಚನ್ನಬಸವಣ್ಣನವರ ಜೀವನ ಸಂದೇಶ ಯುವಪೀಳಿಗೆಗೆ ಪ್ರೇರಕ ಎಂದರು.
ಹಿರಿಯ ಉಪನ್ಯಾಸಕ ಜಿ. ಎಸ್. ಭಾಗೇಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎಸ್. ಪಾಟೀಲ ಆಶಯ ನುಡಿಗಳನ್ನಾಡಿದರು. ಇಂಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಐ. ಬಿ. ಸುರಪುರ, ಉಪಾಧ್ಯಕ್ಷ ಎಚ್. ಎಸ್. ಎಳೆಗಾಂವ, ಕದಳಿ ವೇದಿಕೆ ಉಪಾಧ್ಯಕ್ಷೆ ರಾಜಶ್ರೀ ಕ್ಷತ್ರಿ, ಸತೀಶ ಈಶ್ವರಗೊಂಡ, ಪ್ರಭು ಭೈರಜಿ, ಎಸ್. ಎಫ್. ಭೈರಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ನಿವೃತ್ತ ನೌಕರ ಪರುತಯ್ಯ ಮಠಪತಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಉಪನ್ಯಾಸಕ ರಮೇಶ ಮೇತ್ರಿ ನಿರೂಪಿಸಿದರು. ಬಿ ಕೆ ಶಿವೂರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.