ತಾಂಬಾ:ಗ್ರಾಮದ ವೀರರಾಣಿ ಕಿತ್ತೂರ ಚನ್ನಮ್ಮನ ಓಣಿ ಮೂಲ ಸೌಲಭ್ಯ ಕೊರತೆಯಿಂದ ಬಳಲುತ್ತಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ, ಬಹು ದಿನಗಳಿಂದ ಇಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ.
ಊರು ಎಂದ ಮೇಲೆ ಸಮಸ್ಯೆಗಳಿರುವುದು ಸಹಜ. ಆದರೆ ನಮ್ಮ ಸಮಸ್ಯೆ ಪರಿಹರಿಸಿ ಎಂದು ಸ್ಥಳೀಯ ಆಡಳಿತಕ್ಕೆ ಹಲ ಬಾರಿ ಮನವಿ ಕೊಟ್ಟರೂ, ಇದೂವರೆಗೂ ಯಾರೊಬ್ಬರು ಸ್ಪಂದಿಸುತ್ತಿಲ್ಲ. ನಮ್ಮ ಸಮಸ್ಯೆ ಪರಿಹಾರಗೊಂಡಿಲ್ಲ ಎಂಬ ದೂರು ಗ್ರಾಮಸ್ಥರದ್ದಾಗಿದೆ.
‘ಗ್ರಾಮದ ಪ್ರಮುಖ ಬೀದಿಗಳಲ್ಲೇ ಚರಂಡಿ ನೀರು ನಿಂತು ಗಬ್ಬು ವಾಸನೆ ಬರುತ್ತಿದೆ. ಸಂಜೆಯಾದರೆ ಸೊಳ್ಳೆಗಳ ಕಾಟ ಹೇಳತೀರದು. ಈ ರಸ್ತೆಗಳಲ್ಲಿ ಓಡಾಡಲು ಸಾಧ್ಯವಿಲ್ಲ. ಮೂಗು ಮುಚ್ಚಿಕೊಂಡೇ ಇಲ್ಲಿ ನಡೆಯಬೇಕು. ಮಹಿಳೆಯರ ಗೋಳು ಕೇಳುವುದೇ ಬೇಡ. ವೈಯಕ್ತಿಕ ಶೌಚಗೃಹ ನಿರ್ಮಾಣವಾಗದ ಕಾರಣ, ಮಹಿಳೆಯರು ಶೌಚಕ್ಕೆ ಬಯಲನ್ನೇ ಅವಲಂಬಿಸುವುದು ಇಂದಿಗೂ ತಪ್ಪದು’ ಎನ್ನುತ್ತಾರೆ ಬಸವರಾಜ ಪೂಜಾರಿ.
‘ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದರೆ ಉದ್ಘಾಟನೆ ಬಳಿಕ ಗ್ರಾಮಸ್ಥರಿಗೆ ನೀರು ಕೊಟ್ಟಿದ್ದು ಅಪರೂಪ. ರಾಜಕೀಯ ನಾಯಕರ ಭಾವಚಿತ್ರ ಪ್ರದರ್ಶನಕ್ಕಿದೆ ಎಂಬಂತಾಗಿದೆ. ಇದರಿಂದ ಮಹಿಳೆಯರು ಶುದ್ಧ ಕುಡಿಯುವ ನೀರು ತರಲು ನಿತ್ಯ ಗ್ರಾಮದಿಂದ ಕಿ.ಮೀ. ದೂರ ಅಲೆದಾಡುವುದು ಅನಿವಾರ್ಯವಾಗಿದೆ’ ಎಂದು ರಾಜು ಅಳ್ಳೂರ ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.