ಮುದ್ದೇಬಿಹಾಳ:ಭಗವದ್ಗೀತೆ ನಮಗೆ ಸತ್ಯ, ನ್ಯಾಯದ ಪಾಠ ಕಲಿಸಿ ಕೊಡುತ್ತದೆ. ಮನುಷ್ಯ ಸತ್ಯವಂತನಾಗಿ, ಧರ್ಮದಿಂದ ಬದುಕುವುದನ್ನು ಹೇಳುತ್ತದೆ. ಪ್ರತಿ ಮನೆಯಲ್ಲೂ ಗೀತ ಪಠಣ ಆಗಬೇಕು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ರಾಘವೇಂದ್ರ ರಾಯರ ಮಠದ ಕಲ್ಯಾಣ ಮಂಟಪದಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಹಾಗೂ ಜ್ಞಾನಭಾರತಿ ವಿದ್ಯಾಮಂದಿರಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗೂ ಭಗವದ್ಗೀತೆ ಪರಿಹಾರ ನೀಡುತ್ತದೆ. ನಿತ್ಯ ಮುಂಜಾನೆ ಗೀತೆಯ ಪಾಠಗಳನ್ನು ಪಠಿಸಿದರೆ ದಿನ ಪೂರ್ತಿ ಉತ್ಸಾಹ ಇರುತ್ತದೆ ಎಂದರು.
ಬಸವಣ್ಣ ಹೇಳಿದಂತೆ ದಯವೇ ಧರ್ಮದ ಮೂಲವಾಗಿದೆ ಎಂದರು.
ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಸನ್ನ ಜೋಶಿ ಮಾತನಾಡಿ, ವೈದ್ಯ ಮತ್ತು ಶಿಕ್ಷಕ ತತ್ವಜ್ಞಾನಿ ಆಗಿರಬೇಕು ಇದರಿಂದ ಉತ್ತಮ ಚಿಕಿತ್ಸೆ, ಬೋಧನೆ ಸಾಧ್ಯವಾಗುತ್ತದೆ ಎಂಧರು.
ಭಗವದ್ಗೀತೆಯು ಮೋಕ್ಷಕ್ಕೆ ದಾರಿ ತೋರಿಸುವ ದೀವಿಗೆಯಾಗಿದೆ. ಆಯುರ್ವೇದಕ್ಕೆ ಭಗವದ್ಗೀತೆಯೇ ಮೂಲವಾಗಿದೆ ಎಂದರು.
ಪತ್ರಕರ್ತ ಡಿ.ಬಿ.ವಡವಡಗಿ, ಟಿ.ಎಸ್.ರಾಮದುರ್ಗ, ಪ್ರಭು ಕಡಿ, ಬಿ.ಪಿ.ಕುಲಕರ್ಣಿ ಭಗವದ್ಗೀತೆ ಕುರಿತು ಮಾತನಾಡಿದರು.
ಸ್ವಾಮಿ ವಿವೇಕಾನಂದ ವಿದ್ಯಾಪ್ರಸಾರಕ ಸಮಿತಿ ಅಧ್ಯಕ್ಷ ಬಾಬುಲಾಲ ಓಸ್ವಾಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ವಿಠ್ಠಲ ಪದಕಿ ಇದ್ದರು.
ಗುರುಮಾತೆಯರಾದ ರಂಜಿತಾ ಹೆಗಡೆ, ಲೀಲಾ ಭಟ್ ಮಾತಾಜಿ, ರೇಖಾ ಹೂಗಾರ ಮತ್ತು ವಿದ್ಯಾರ್ಥಿಗಳು ಗೀತೆಯ 5ನೇ ಅಧ್ಯಾಯ ಪಠಿಸಿದರು. ಅರುಣ ಹುನಗುಂದ ಸ್ವಾಗತಿಸಿದರು. ಅಭಿಯಾನದ ಸಂಚಾಲಕ ರಾಮಚಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಪಡದಾಳಿ, ಬಸವರಾಜ ಬೆಳ್ಳಿಕಟ್ಟಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಜ್ಞಾನಭಾರತಿ ಶಾಲೆಯಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ರಾಯರ ಮಠದವರೆಗೂ ಭಗವದ್ಗೀತೆಯನ್ನು ಸಾರೋಟಿನಲ್ಲಿಟ್ಟು ಶೋಭಾಯಾತ್ರೆ ನಡೆಸಲಾಯಿತು.
***
ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಮನುಷ್ಯ ಸಂತಸದಿಂದ ನೆಮ್ಮದಿಯಿಂದ, ಯಾರಿಗೂ ಕೆಡಕು ಬಯಸದೇ ಜೀವನ ನಡೆಸುವಂತೆ ಅವುಗಳು ಹೇಳುತ್ತವೆ
–ಎ.ಎಸ್.ಪಾಟೀಲ ನಡಹಳ್ಳಿ,ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.