ADVERTISEMENT

ಸಿಂದಗಿ | ತೆರವು ಕಾರ್ಯಾಚರಣೆ ಜೋರು; ಅಭಿವೃದ್ಧಿ ಕಾರ್ಯ ಶೂನ್ಯ

ಸಿಂದಗಿಯಲ್ಲಿ ಆರು ತಿಂಗಳಿಂದ ಮುಂದುವರೆದ ಅಕ್ರಮ ತೆರವು

ಶಾಂತೂ ಹಿರೇಮಠ
Published 10 ಫೆಬ್ರುವರಿ 2025, 4:07 IST
Last Updated 10 ಫೆಬ್ರುವರಿ 2025, 4:07 IST
ಸಿಂದಗಿಯಲ್ಲಿ ಪುರಸಭೆ ವತಿಯಿಂದ ಮುಂದುವರೆದ ಐದನೆಯ ಹಂತದ ರಸ್ತೆ ಅಗಲೀಕರಣ ಕಾರ್ಯಾಚರಣೆ
ಸಿಂದಗಿಯಲ್ಲಿ ಪುರಸಭೆ ವತಿಯಿಂದ ಮುಂದುವರೆದ ಐದನೆಯ ಹಂತದ ರಸ್ತೆ ಅಗಲೀಕರಣ ಕಾರ್ಯಾಚರಣೆ   

ಸಿಂದಗಿ: ಪುರಸಭೆಯಿಂದ ಪಟ್ಟಣದಲ್ಲಿ 4-5 ತಿಂಗಳಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ ಐದನೇ ಹಂತ ತಲುಪದೆ. ಹಲವಾರು ತಿಂಗಳಿಂದ ತೆರುವುಗೊಂಡಿರುವ ರಸ್ತೆಗಳ ಬದಿಯಲ್ಲಿ ಈವರೆಗೂ ಅಭಿವೃದ್ಧಿಯ ಸುಳಿವು ಕಾಣುತ್ತಿಲ್ಲ.

ತೆರವು ಕಾರ್ಯಾಚರಣೆ ಕೂಡ ಅರೆಬರೆ ಮಾಡಲಾಗಿದೆ. ಅನುದಾನದ ಕೊರತೆಯಿಂದ ಪಟ್ಟಣದಲ್ಲಿನ ರಸ್ತೆ ಬದಿಯ ಪ್ರದೇಶವೆಲ್ಲ ಬಟಾ ಬಯಲಾಗಿ ಬಿಕೋ ಎನ್ನುತ್ತಿದೆ. ದೂಳುಮಯ ವಾತಾವರಣ ಇದೆ. ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿರುವುದಾಗಿ ಹೇಳಿಕೊಳ್ಳುವ ಶಾಸಕರು ಸಿಂದಗಿ ಪಟ್ಟಣದ ಅಭಿವೃದ್ಧಿ  ಕಡೆಗಣಿಸಿರುವ ಆರೋಪ ಕೇಳಿಬಂದಿದೆ.

‘ಸಿಂದಗಿ ಪಟ್ಟಣದ ಅಭಿವೃದ್ಧಿ ಮತ್ತು ಬಾಕಿ ಉಳಿದ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದ್ದು ಏಕೆ? ಎಂಬುದನ್ನು ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ದಸ್ತಗೀರ ಮುಲ್ಲಾ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತೆರಿಗೆ ಸೋರಿಕೆ:

‘ಸಾರ್ವಜನಿಕರಿಂದ ಸಾಕಷ್ಟು ಆಸ್ತಿ ತೆರಿಗೆ ಹಣ ಪುರಸಭೆ ಕಾರ್ಯಾಲಯಕ್ಕೆ ಜಮೆಯಾಗದೇ ಸೋರಿಕೆಯಾಗುತ್ತಿದೆ. ಈ ಸೋರಿಕೆ ತಡೆಗಟ್ಟಿದರೆ ತೆರಿಗೆ ಹಣ ಕ್ರೋಡೀಕರಣಗೊಳಿಸಿ ಪಟ್ಟಣದ ಅಭಿವೃದ್ಧಿಪಡಿಸಬಹುದು’ ಎಂದು ಪುರಸಭೆ ಸದಸ್ಯ ಸಾಯಬಣ್ಣ ಪುರದಾಳ ಅಭಿಪ್ರಾಯಪಟ್ಟಿದ್ದಾರೆ.

‘ಪಟ್ಟಣದ ಸೌಂದರ್ಯೀಕರಣ, ಅಭಿವೃದ್ಧಿಗಾಗಿ ಸದಾ ಕಂಕಣಬದ್ಧನಾಗಿರುವೆ. ಏಪ್ರಿಲ್ ತಿಂಗಳ ನಂತರ ಬಜೆಟ್ ಮಂಡನೆಯಾದ ಮೇಲೆ ಸರ್ಕಾರದಿಂದ ಪ್ರತಿಯೊಂದು ಮತಕ್ಷೇತ್ರಕ್ಕೆ ಅತ್ಯಧಿಕ ಹಣ ಎಸ್ಎಫ್‌ಸಿ ಯೋಜನೆಯಡಿ ನೀಡಬಹುದೆಂಬ ಆಶಾಭಾವ ಇದೆ. ತೆರವು ಕಾರ್ಯಾಚರಣೆ ಮಾಡುವ ಮುನ್ನ ಯೋಜನೆ ರೂಪಿಸಿ ಬೇಕಾದ ಹಣವನ್ನು ಕಾಯ್ದಿರಿಸಿದರೆ ತಕ್ಷಣ ಅಭಿವೃದ್ಧಿ ಕಾರ್ಯ ನಡೆಯುತ್ತದೆ. ಅಂತೆಯೇ ಆಲಮೇಲ ಪಟ್ಟಣದಲ್ಲಿ ತೆರವು ಕಾರ್ಯಾಚರಣೆ ಜೊತೆಗೆ ₹ 20 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಯೂ ಪ್ರಾರಂಭಗೊಂಡಿದೆ’ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.

ಅಶೋಕ ಮನಗೂಳಿ
₹ 2 ಕೋಟಿ ಬಿಡುಗಡೆ:ಮನಗೂಳಿ
ಪುರಸಭೆಗೆ ಎಸ್ಎಫ್‌ಸಿ ಯೋಜನೆಯಡಿ ₹5 ಕೋಟಿ ಅನುದಾನ ಕೋರಿ ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಶೇಷ ಅನುದಾನದಲ್ಲಿ ₹ 2 ಕೋಟಿ ಬಿಡುಗಡೆಗೊಳಿಸಿದ್ದಾರೆ. ಇದರಲ್ಲಿ ₹ 1 ಕೋಟಿ ನೂತನ ತಾಲ್ಲೂಕು ಆಡಳಿತ ಸೌಧ ಕಟ್ಟಡದ ಕಂಪೌಂಡ್ ಗೆ ತೆಗೆದಿರಿಸಿ ₹1 ಕೋಟಿ ಗೋಲಗೇರಿ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಅಂದಾಜು 50 ಮಳಿಗೆ ನಿರ್ಮಾಣ ಮಾಡಲು ಸೂಚಿಸಿರುವೆ. ಅಗತ್ಯ ಅನುದಾನ ಕಾಯ್ದಿರಿಸಿ ತೆರವು ಕಾರ್ಯಾಚರಣೆ ಆಗಬೇಕಿತ್ತು. ಆದಾಗ್ಯೂ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುವೆ. -ಅಶೋಕ ಮನಗೂಳಿ ಶಾಸಕ ಸಿಂದಗಿ 
ವಿಶೇಷ ಅನುದಾನಕ್ಕಾಗಿ ಪ್ರಯತ್ನ
ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಬಸ್ ತಂಗುದಾಣ ಮತ್ತು ಮಕ್ಕಳಿಗೆ ಆಟವಾಡಲು ಅಗತ್ಯ ಸಲಕರಣೆಗಳಿಗಾಗಿ ಶಾಸಕರು ತಮ್ಮ ಅನುದಾನದಲ್ಲಿ ಈ ಕಾಮಗಾರಿ ಮಾಡುವ ಕುರಿತು ತಿಳಿಸಿದ್ದಾರೆ. ಬಸವೇಶ್ವರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪಾದಚಾರಿಗಳಿಗಾಗಿ ತಿರುಗಾಡಲು ಪೇವರ್ಸ್ ಹಾಕಿ ಗ್ರಿಲ್ ಕೂಡ್ರಿಸುವ ಕಾಮಗಾರಿಗಾಗಿ ₹ 1 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಟೆಂಡರ್ ಕರೆಯಲಾಗಿದೆ. ಪಟ್ಟಣವನ್ನು ಅಭಿವೃದ್ದಿಪಡಿಸಲು ಶಾಸಕರ ಸಹಕಾರ ಇದೆ. ವಿಶೇಷ ಅನುದಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. -ಶಾಂತವೀರ ಬಿರಾದಾರ ಅಧ್ಯಕ್ಷ ಪುರಸಭೆ ಸಿಂದಗಿ. 
ಅನುದಾನದ ಕೊರತೆ: ಸಾಯಬಣ್ಣ
‘ಪುರಸಭೆಯಲ್ಲಿ ತನ್ನದೇ ಆದ ಸಂಪನ್ಮೂಲಗಳಿದ್ದಲ್ಲಿ ತೆರುವು ಕಾರ್ಯಾಚರಣೆಗೆ ಮುಂದಾಗಬೇಕಿತ್ತು. ಈಗ ಅನುದಾನದ ಕೊರತೆ ಎದುರಾಗಿ ತೆರುವುಗೊಳಿಸಿದ ಜಾಗೆಯಲ್ಲಿ ಅಭಿವೃದ್ದಿಪಡಿಸಲು ವಿಳಂಬವಾಗುತ್ತಿದೆ. ಸರ್ಕಾರದಿಂದ ಬರಬೇಕಿದ್ದ ಅನುದಾನದ ನಿರೀಕ್ಷೆ ಒಂದು ಕಡೆಯಾದರೆ ಇನ್ನೊಂದು ಕಡೆ ಪುರಸಭೆಗೆೆ ಆರ್ಥಿಕ ಸಂಕಷ್ಟ ಎದುರಾಗಲು ಪುರಸಭೆ ಕಾರ್ಯಾಲಯದಲ್ಲಿ ನಕಲಿ ಚಲನ್ ಗಳನ್ನು ಸೃಷ್ಠಿಸಿ ತೆರಿಗೆ ಹಣ ಸೋರಿಕೆಯಾಗುತ್ತಿದೆ. ಪುರಸಭೆಗೆ ಸಾಕಷ್ಟು ತೆರಿಗೆ ಹಣ ಜಮೆಯಾಗದೇ ಇರುವುದರಿಂದ ಅಭಿವೃದ್ಧಿ ಕುಂಠಿತಗೊಳ್ಳುತ್ತಲಿದೆ. -ಸಾಯಬಣ್ಣ ಪುರದಾಳ ಪುರಸಭೆ ಸದಸ್ಯ
₹10 ಕೋಟಿ ವಿಶೇಷ ಅನುದಾನಕ್ಕೆ ಬೇಡಿಕೆ
ಪುರಸಭೆ ಸದಸ್ಯರ ನಿಯೋಗ ಪೌರಾಡಳಿತ ಸಚಿವರಿಗೆ ಭೇಟಿಯಾಗಿ ಪಟ್ಟಣದ ಅಭಿವೃದ್ಧಿಗೆ ₹ 10 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಅದರಲ್ಲಿ ₹ 5 ಕೋಟಿ ಅನುದಾನ ಶೀಘ್ರದಲ್ಲಿ ಪುರಸಭೆಗೆ ಜಮೆಯಾಗಲಿದೆ. ಅದರಲ್ಲಿ ₹ 1.50 ಕೋಟಿ ವೆಚ್ಚದಲ್ಲಿ ಟಿಪ್ಪುಸುಲ್ತಾನ್‌ ವೃತ್ತದಿಂದ ತೋಂಟದ ಸಿದ್ಧಲಿಂಗ ಶ್ರೀಗಳ ಮುಖ್ಯರಸ್ತೆ ಮಾರ್ಗವಾಗಿ ಸ್ವಾಮಿವಿವೇಕಾನಂದ ವೃತ್ತದವರೆಗೆ ಟಿ.ಸಿ ರಸ್ತೆ ಚರಂಡಿ ಹಾಗೂ ಪುರಸಭೆ ಕಾರ್ಯಾಲಯದ ಬಳಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಹಣಮಂತ ಸುಣಗಾರ ಪುರಸಭೆ ಸದಸ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.