
ಚಡಚಣ: ‘ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಕ್ರಮವಹಿಸುವುದಾಗಿ ಅವರು ಮೌಖಿಕ ಒಪ್ಪಿಗೆ ನೀಡಿದ್ದಾರೆ’ ಎಂದು ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ತಾಲ್ಲೂಕಿನ ಧೂಳಖೇಡ ರಾಷ್ಟ್ರೀಯ ಹೆದ್ದಾರಿ–52ರಿಂದ ಶಿರನಾಳ ಗ್ರಾಮದವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ನಾಗಠಾಣ ಮತಕ್ಷೇತ್ರವು ರಾಜ್ಯದಲ್ಲೇ ಅತಿ ಉದ್ದ ಹಾಗೂ ಅಗಲವಿದ್ದು, ಉತ್ತಮ ರಸ್ತೆಗಳು, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ. ಚುನಾವಣೆ ಪೂರ್ವ ಕೊಟ್ಟಿದ್ದ ಮಾತು ಉಳಿಸಿಕೊಳ್ಳುವೆ. ಸ್ವಲ್ಪ ವಿಳಂಬವಾದರೂ, ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ರಾಜ್ಯ ಸರ್ಕಾರದ ಪ್ರಾಮಾಣಿಕ ಕಾರ್ಯ ನಿಂತಿಲ್ಲ’ ಎಂದು ತಿಳಿಸಿದರು.
ಮುಖಂಡ ಸುರೇಶಗೌಡ ಪಾಟೀಲ ಮಾತನಾಡಿ, ‘ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸರಿಯಾಗಿ ಉಸ್ತವಾರಿ ಮಾಡಿ, ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು’ ಎಂದರು.
ಕೆ.ಆರ್.ಐ.ಡಿ.ಎಲ್ ಅಧಿಕಾರಿ ರಾಜೇಂದ್ರ ಹೂಗಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಿಲೀಪ ಶಿವಶರಣ, ದಯಾನಂದ ಪಾಟೀಲ, ಸೋಮುಗೌಡ ಪಾಟೀಲ, ಸಿದ್ದರಾಮ ಮೈದರಗಿ, ಕಲ್ಲಪ್ಪ ಗುಮತೆ, ಜಗನ್ನಾಥ ಕೊಡತೆ, ಬಂದೆನಾವಜ್ ಮುಲ್ಲಾ, ಶಿವಾನಂದ ರೇವತಗಾಂವ, ಗಜಾನಂದ ಬಿರಾದಾರ, ಶಿವಾನಂದ ಧೂಳಖೇಡ, ರವಿ ಜಾಧವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.