ADVERTISEMENT

ಎಕರೆಗೆ ₹25 ಸಾವಿರ ಪರಿಹಾರ ನೀಡಿ: ಅಂಬಾರಾಯ ಅಷ್ಟಗಿ ಆಗ್ರಹ

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 6:23 IST
Last Updated 25 ಆಗಸ್ಟ್ 2025, 6:23 IST
ಅಂಬಾರಾಯ ಅಷ್ಟಗಿ
ಅಂಬಾರಾಯ ಅಷ್ಟಗಿ   

ಕಲಬುರಗಿ: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಮುಂಗಾರು ಬೆಳೆಗಳು ಹಾನಿಯಾಗಿವೆ. ಸರ್ಕಾರ ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಸಮೀಕ್ಷೆ ನಡೆಸಿ, ಎಕರೆಗೆ ₹25ಸಾವಿರ ಪರಿಹಾರ ನೀಡಬೇಕು’ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಆಗ್ರಹಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ ಅತಿವೃಷ್ಟಿಯಿಂದಾಗಿ ತೋಗರಿ, ಹೆಸರು, ಉದ್ದು, ಸೋಯಾ, ಎಳ್ಳು, ಹತ್ತಿ ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ನಾಶವಾಗಿವೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಜಂಟಿ ಸರ್ವೆ ನಡೆಸಿ ಪರಿಹಾರಕ್ಕೆ ಮುಂದಾಗಬೇಕು’ ಎಂದರು.

‘ಬೆಳೆವಿಮೆ ಮಾಡಿದ ರೈತರು ದೂರು ನೀಡಲು ಟೋಲ್ ಫ್ರೀ ನಂಬರಗೆ ಕರೆ ಮಾಡಿದಾಗ ಕರೆ ಸ್ವೀಕರಿಸುತ್ತಿಲ್ಲ. ಖುದ್ದಾಗಿ ಕೃಷಿಯ ಇಲಾಖೆಯ ಕಚೇರಿಗೆ ಹೋಗಿ ದೂರು ಸಲ್ಲಿಸಲು ಹೇಳಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಟೋಲ್ ಫ್ರೀ ನಂಬರ್ ಮುಕ್ತವಾಗಿಡಬೇಕು. ಕಳೆದ ವರ್ಷ ಬೆಳೆವಿಮೆ ಮಾಡಿಸಿದ ರೈತರಿಗೆ ಒಂದು ಕಂತಿನ ಹಣ ನೀಡಿದ್ದು, ಇನ್ನೂ ಒಂದು ಕಂತಿನ ಹಣ ಬಾಕಿ ಇದೆ. ಆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅಫಜಲಪುರ ತಾಲ್ಲೂಕಿನಲ್ಲಿ 69 ಮನೆಗಳು, ಆಳಂದ ತಾಲ್ಲೂಕಿನಲ್ಲಿ 29 ಮನೆಗಳಿಗೆ ಹಾನಿಯಾಗಿದೆ. ನೂರಾರು ಮನೆಗಳು ಭಾಗಶಃ ಕುಸಿದಿದ್ದು, ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಹಾನಿಗೊಳಗಾದ ಮನೆಗಳ ಪುನನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.

‘ಮಳಖೇಡನಲ್ಲಿ ಪ್ರವಾಹದ ನೀರು ಉತ್ತರಾದಿಮಠದ ಜಯತೀರ್ಥರ ಮೂಲ ಬೃಂದಾವನದ ಗರ್ಭಗುಡಿಗೆ ಪ್ರವೇಶಿಸಿದೆ. ಮಣ್ಣೂರ ಗ್ರಾಮದ ರೇಣುಕಾಯಲ್ಲಮ್ಮ ದೇವಿ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಭಕ್ತರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸರ್ಕಾರ ಶಾಶ್ವತ ಪರಿಹಾರ ಕೈಗೊಳ್ಳಬೇಕು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಗಣೇಶ ವಳಕೇರಿ, ರವಿ ಮದನಕರ್, ಜೈ ಭೀಮ್ ಕಟ್ಟಿ, ಜಿ.ಬಿ ಪಾಟೀಲ, ಶಿವಕುಮಾರ ಕೊಟ್ನಳ್ಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.