ADVERTISEMENT

ಲಾಕ್‍ಡೌನ್ ಪರಿಹಾರ ಹಣ ವರ್ಗಾವಣೆಗೆ ಆಗ್ರಹ

ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 10:16 IST
Last Updated 12 ಜುಲೈ 2021, 10:16 IST
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಕಟ್ಟಡ ನಿರ್ಮಾಣ ಕಾರ್ಮಿಕರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಕಟ್ಟಡ ನಿರ್ಮಾಣ ಕಾರ್ಮಿಕರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ, ಮನವಿ ಸಲ್ಲಿಸಿದರು.

ಜಿಲ್ಲಾ ಸಂಚಾಲಕ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಕೋವಿಡ್ ಎರಡನೇ ಅಲೆಯ ಲಾಕ್‍ಡೌನ್ ಪರಿಹಾರವಾಗಿ ₹3 ಸಾವಿರ ಘೋಷಣೆಯಾಗಿದ್ದರೂ ಬಹುಪಾಲು ಕಾರ್ಮಿಕರಿಗೆ ಹಣ ವರ್ಗಾವಣೆ ಆಗಿಲ್ಲ. ಆಧಾರ್ ನಂಬರ್ ಆಧರಿಸಿ ಪಾವತಿ ಮಾಡುತ್ತಿರುವುದರಿಂದ ಆನೇಕ ತಾಂತ್ರಿಕ ತೊಂದರೆ ತಲೆದೋರಿ ಫಲಾನುಭವಿಗಳ ಕೈಗೆ ಹಣ ಸೇರುತ್ತಿಲ್ಲ ಎಂದು ಆರೋಪಿಸಿದರು.

ಬಹಳ ಮಂದಿ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಲ್ಲ. ಇಂತವರಿಗೆ ನಗದು ವರ್ಗಾವಣೆ ಆಗಿಲ್ಲ. ಆಧಾರ್ ಜೋಡಣೆ ಮಾಡಿದಿದ್ದರು ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆಹಾರ ಕಿಟ್ ನೀಡುವ ವಿಚಾರದಲ್ಲಿ ಸಗಟು ಮಾರಾಟ ದರದ ದುಪ್ಪಟ್ಟು ಹಣ ನೀಡಿ ಖರೀದಿ ಮಾಡಿರುವುದು, ಕಳಪೆ ಆಹಾರ ಸಾಮಗ್ರಿ ನೀಡಲಾಗಿದೆ ಎಂದು ಆರೋಪಿಸಿದರು.

ವೈದ್ಯಕೀಯ ವೆಚ್ಚ ಸಂಪೂರ್ಣ ಭರಿಸಬೇಕು, ಮದುವೆ ಸಹಾಯಧನ ವಿಳಂಬವಾಗುತ್ತಿದ್ದು ತಕ್ಷಣ ನೀಡಬೇಕು, ಸಹಜ ಮರಣ ಪರಿಹಾರದ ಮೊತ್ತ ಹೆಚ್ಚಿಸಬೇಕು, ಹೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಬೇಕು, ಮನೆ ನಿರ್ಮಾಣಕ್ಕೆ ₹ 5 ಲಕ್ಷ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಹಸಂಚಾಲಕಿ ಮಹಾದೇವಿ ಧರ್ಮಶೆಟ್ಟಿ, ಆಕಾಶ ರಾಮತೀರ್ಥ, ಫಾತಿಮಾ ಶೇಖ್‌, ನೂರ್‌ಜಾನ್‌ ಮುಜಾವರ, ಮಹಮ್ಮದ್‌ ನದಾಫ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

****

ಅರ್ಹ ಕಾರ್ಮಿಕರಿಗೆ ಆಹಾರದ ಕಿಟ್‍ ಸಿಗುತ್ತಿಲ್ಲ, ಇದನ್ನು ಕಾರ್ಮಿಕ ಇಲಾಖೆ ಅಥವಾ ಕಾರ್ಮಿಕ ಸಂಘಗಳ ಮೂಲಕ ವಿತರಣೆ ಮಾಡಬೇಕು
–ಮಹಾದೇವಿ ಧರ್ಮಶೆಟ್ಟಿ, ಜಿಲ್ಲಾ ಸಹಸಂಚಾಲಕಿ
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.