ತಿಕೋಟಾ: ‘ಕೊರೊನಾ ಸೋಂಕು ಹರಡದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಕೆ.ಬಿರಾದರ ಹೇಳಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗೆ ಕಿವಿಗೊಡದೆ ಧೈರ್ಯದಿಂದ ಇರಬೇಕು. ದಿನನಿತ್ಯದ ಕಾರ್ಯಗಳನ್ನು ಸ್ವಚ್ಛತೆಯಿಂದ ಮಾಡಿಕೊಂಡು ಹೋಗಬೇಕು. ಆರೋಗ್ಯ ಅಧಿಕಾರಿಗಳು ನಿಮ್ಮ ಜೊತೆ ಇದ್ದಾರೆ’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಠೋಡ ಮಾತನಾಡಿ, ‘ತಾಲ್ಲೂಕಿಗೆ ಬರುವ ವಿದೇಶಿ ಪ್ರಯಾಣಿಕರನ್ನು ರೋಗ ಲಕ್ಷಣ ಇಲ್ಲದಿದ್ದರೂ ಸಹ ೧೪ ದಿನ ಅವರ ಮನೆಗಳಲ್ಲೇ ಪ್ರತ್ಯೇಕವಾಗಿ ಇರಿಸಲಾಗುತ್ತಿದೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಇಂತಹ ಮನೆಗಳ ಸಮೀಪ ನಿಯೋಜನೆ ಮಾಡಲಾಗುತ್ತಿದೆ’ ಎಂದು ಹೇಳಿದರು.
ತಹಶೀಲ್ದಾರ್ ಸಂತೋಷ ಮ್ಯಾಗೇರಿ ಮಾತನಾಡಿ, ‘ಮುಂಜಾಗ್ರತೆ ಕ್ರಮವಾಗಿ ಮಾ.೩೧ರ ವರೆಗೆ ತಾಲ್ಲೂಕಿನಲ್ಲಿ ನಡೆಯುವ ಸಂತೆ, ಜಾತ್ರೆ, ಸಾರ್ವಜನಿಕ ಸಭೆ, ಸಮಾರಂಭ, ಕ್ರೀಡಾ ಚಟುವಟಿಕೆಗಳು, ಹೋಟೆಲ್, ರಸ್ತೆ ಬದಿಯ ಚಹಾ ಅಂಗಡಿ, ತಂಪು ಪಾನೀಯ, ಪಾನಿಪುರಿ, ಭಜ್ಜಿ, ವಡಾಪಾವ್, ಎಗ್ರೈಸ್ ಮತ್ತು ಚೀನಿ ಪದಾರ್ಥಗಳನ್ನು ತಯಾರಿಸುವ ಅಂಗಡಿಗಳು, ಖಾಸಗಿ ಕೋಚಿಂಗ್ ಸೆಂಟರ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ತಿಳಿಸಿದರು.
ಸಬ್ ಇನ್ಸ್ಪೆಕ್ಟರ್ ಐ.ಎಂ.ದುಂಡಸಿ, ಡಾ.ಮುಬಾಸೀರ, ಪಿಡಿಒ ಸಿದ್ದಯ್ಯ ಗದಗಿಮಠ, ತಹಶೀಲ್ದಾರ್ ಗ್ರೇಡ್– 2 ಎಸ್.ಎಸ್.ಅರಕೇರಿ, ಉಪತಹಶೀಲ್ದಾರ್ ಆರ್.ಎಚ್.ಸುಣಗಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.