ವಿಜಯಪುರ: ಅಪರಾಧಗಳನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರ ಪಾತ್ರ ಪ್ರಮುಖವಾಗಿದೆ. ಅಪರಾಧಗಳನ್ನು ತಡೆಗಟ್ಟುವುದು ಸಹ ಒಂದು ಬಹುಮುಖ್ಯ ಸೇವೆ ಎಂದು ಪೊಲೀಸ್ ಅಧಿಕಾರಿ ಎಂ.ಎಚ್. ಜಹಾಗೀರದಾರ ಹೇಳಿದರು.
ನಗರದ ಆದರ್ಶ ನಗರದಲ್ಲಿರುವ ಎಕ್ಸಲೆಂಟ್ ಕನ್ನಡ-ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ದೇಶದ ಕಾನೂನುಗಳ ಬಗ್ಗೆ ಅರಿವು ಇರಬೇಕಾದುದು ಅಗತ್ಯ ಎಂದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ (ಪೋಕ್ಸೊ) ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ ಹೀಗೆ ಮಕ್ಕಳ ರಕ್ಷಣೆಗೆ ಹಾಗೂ ಸುರಕ್ಷತೆಗೆ ಅನೇಕ ಕಾನೂನುಗಳಿದ್ದು, ಈ ಕಾನೂನಿನ ಅಂಶಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಹೊಂದಬೇಕು ಎಂದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಆಗುವ ದೌರ್ಜನ್ಯಗಳನ್ನು ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡುವ ಮೂಲಕ ಸಂಭವಿಸಲಿರುವ ಅಪಾಯವನ್ನು ತಡೆಗಟ್ಟಬಹುದಾಗಿದೆ ಎಂದು ವಿವರಿಸಿದರು.
ಮುಖ್ಯ ಶಿಕ್ಷಕ ಎಂ.ಐ. ಬಿರಾದಾರ ಮಾತನಾಡಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ರಾಜಶೇಖರ ಕೌಲಗಿ, ಸಾವಿತ್ರಿ, ಉಮಾ ಶಹಬಾದೆ, ಪಿ.ಬಿ. ಖೇಡಗಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.