ADVERTISEMENT

ವಿಜಯಪುರ: ಅತಿವೃಷ್ಟಿಯಿಂದ ಬೆಳೆಹಾನಿ, ರೈತ ಕಂಗಾಲು

ತೊಗರಿ, ಹತ್ತಿ, ತೋಟಗಾರಿಕೆ ಬಹುತೇಕ ಬೆಳೆಗಳು ಹಾನಿ

ರಮೇಶ ಎಸ್.ಕತ್ತಿ
Published 20 ಸೆಪ್ಟೆಂಬರ್ 2025, 6:50 IST
Last Updated 20 ಸೆಪ್ಟೆಂಬರ್ 2025, 6:50 IST
ಆಲಮೇಲ ತಾಲ್ಲೂಕಿನ ಕಡಣಿ ಗ್ರಾಮದ ಹತ್ತಿ ಬೆಳೆಯಲ್ಲಿ ಮಳೆನೀರು ಸಂಗ್ರಹಗೊಂಡು ಬೆಳೆ ಹಾನಿಯಾಗಿದೆ
ಆಲಮೇಲ ತಾಲ್ಲೂಕಿನ ಕಡಣಿ ಗ್ರಾಮದ ಹತ್ತಿ ಬೆಳೆಯಲ್ಲಿ ಮಳೆನೀರು ಸಂಗ್ರಹಗೊಂಡು ಬೆಳೆ ಹಾನಿಯಾಗಿದೆ   

ಅಲಮೇಲ: ತಿಂಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಅರ್ಧದಷ್ಟು ಬೆಳೆ ಹಾಳಾಗಿದೆ. ಇನ್ನು ಅರ್ಧ ಉಳಿದುಕೊಂಡಿದೆ ಎಂಬ ಆಶಾಭಾವನೆಯಿಂದ ಇದ್ದ ರೈತರಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ತೀವ್ರ ಸಂಕಷ್ಟಕ್ಕೆ ದೂಡಿದೆ.

ಒಟ್ಟು 54,368 ಹೆಕ್ಟೇರ್ ಭೌಗೋಳಿಕ ಪ್ರದೇಶದ ಆಲಮೇಲ ತಾಲ್ಲೂಕಿನಲ್ಲಿ 51,301 ಹೆಕ್ಟೇರ್ ಭೂಮಿಯಲ್ಲಿ ಸಾಗುವಳಿಗೆ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ 23,411 ಹೆಕ್ಟೇ‌ರ್ ಹತ್ತಿ, 5,604 ಹೆಕ್ಟೇರ್ ತೊಗರಿ, 12,410 ಹೆಕ್ಟೇರ್ ಕಬ್ಬು ಬಿತ್ತನೆಯಾಗಿದೆ. ತೊಗರಿ, ಹತ್ತಿ, ತೋಟಗಾರಿಕೆ ಬಹುತೇಕ ಬೆಳೆಗಳು ಅತಿಯಾದ ಮಳೆಗೆ ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.

ಸರ್ಕಾರದ ಆದೇಶದ ಮೇರೆಗೆ ಕೃಷಿ ಕಂದಾಯ ಮತ್ತು ತೋಟಗಾರಿಕೆ ಇಲಾಖೆಯಿಂದ ಸರ್ವೇ ಕಾರ್ಯ ನಡೆಸಿದ್ದು ಮೊದಲು ಮಳೆ ಮತ್ತು ಭಿಮಾ ನದಿ ಪ್ರವಾಹದಿಂದ ಹಾನಿಯಾದ ಭೀಮಾ ನದಿ ತೀರದ ಜಮೀನುಗಳಿಗೆ ಭೇಟಿ ನೀಡಿ ಸರ್ವೇ ಮಾಡಲಾಗಿದೆ.

ADVERTISEMENT

‘ನದಿ ತೀರದಿಂದ ಹೊರತು ಪಡಿಸಿದ ಜಮೀನುಗಳಲ್ಲಿ ಹಾಳಾಗಿರುವ ಬೆಳೆಗಳ ಸರ್ವೇ ಮಾಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಆಲಮೇಲ ತಾಲ್ಲೂಕಿನ ಭೀಮಾ ನದಿ ತೀರದ 15 ಗ್ರಾಮಗಳಾದ ಕಡಣಿ, ತಾವರಖೇಡ, ತಾರಾಪುರ, ಮಡ್ಡಳಿ, ಕುರಬತಹಳ್ಳಿ, ಬ್ಯಾಡಗಿಹಾಳ, ಶಂಬೇವಾಡ, ಕುಮಸಗಿ, ದೇವಣಗಾಂವ, ಕುಳಕುಮಟಗಿ, ಕಕ್ಕಳಮೇಲಿ, ಬಗಲೂರ, ಶಿರಸಗಿ ಈ ಎಲ್ಲ ಗ್ರಾಮದ ಜಮಿನುಗಳಿಗೆ ಖುದ್ದಾಗಿ ಭೇಟಿ ನೀಡಿ ಸರ್ವೇಮಾಡಿ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ಭೀಮಾನದಿ ತೀರ ಹೊರತುಪಡಿಸಿ ಸೆಪ್ಟೆಂಬರ್ 6ರವರೆಗೆ ಸರ್ವೇ ಮಾಡಿರುವ
ಪ್ರಕಾರ ಅಂದಾಜು 954 ಹೆಕ್ಟೇರ್ ಹತ್ತಿ, 398 ಹೆಕ್ಟೇರ್ ತೊಗರಿ ಹಾನಿಯಾಗಿರುವ ಬಗ್ಗೆ ವರದಿ ನೀಡಲಾಗಿದೆ. ಇನ್ನುಳಿದದ್ದು ಸಂಪೂರ್ಣವಾಗಿ ಸರ್ವೆ ಬಳಿಕ ನಿಖರ ಮಾಹಿತಿ ಸಿಗಲಿದೆ’ ಎಂದು ಕೃಷಿ ಅಧಿಕಾರ ಅನಿಲ ದಶವಂತ ಮಾಹಿತಿ ನೀಡಿದರು.

‘ಈ ವರ್ಷ ಅತಿಹೆಚ್ಚು ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಕಬ್ಬು ಹೊರತುಪಡಿಸಿದರೆ ಹತ್ತಿ, ತೊಗರಿ ಇನ್ನಿತರ ತೋಟಗಾರಿಕೆ ಬೆಳೆಗಳು ಬಹುತೇಕ ಹಾನಿಯಾಗಿವೆ. ಹತ್ತಿ ಬೆಳೆ ಹಸಿರಾಗಿ ಕಂಡರು ಅದರಲ್ಲಿ ಹೂವು ಕಾಯಿ ಇಲ್ಲದ ಬಂಜರ ಫಲವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಸರ್ವೇ ಮಾಡಿ ರೈತರಿಗೆ ದೊರಕಬೇಕಾದ ಸರ್ಕಾರದ ಪರಿಹಾರ ಒದಗಿಸಬೇಕು‘ ಎಂದು ಗುಂದಗಿ ಗ್ರಾಮದ ರೈತ ನಾಗಪ್ಪ ಕರರ್ಜಗಿ ಮನವಿ ಮಾಡಿದ್ದಾರೆ.

‘ಮಳೆಯಿಂದ ಹಾನಿಯಾದ ಬೆಳೆ ಸರ್ವೇ ಮಾಡುತ್ತಿದ್ದು ಸಣ್ಣಪುಟ್ಟ ರೈತರಿಗೆ ಸರ್ಕಾರದಿಂದ ಸಿಗುವ ಪರಿಹಾರ ಕೊಡಿಸಬೇಕು. ಕಳೆದ ವರ್ಷ ತೊಗರಿ ಬೆಳೆಯು ನೆಟೆ ರೋಗದಿಂದ ಹಾನಿಯಾಗಿದೆ ಎಂದು ಸರ್ಕಾರ ಘೋಷಣೆ ಮಾಡಿದ್ದರೂ ಯಾವುದೆ ಪರಿಹಾರ ಮತ್ತು ಬೆಳೆ ವಿಮೆ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ರೈತರಿಗೆ ಬರಬೇಕಾದ ವಿಮೆ ಮತ್ತು ಪರಿಹಾರ ಕೊಡಿಸಬೇಕು’ ಎಂದು ಕಡಣಿ ಗ್ರಾಮದ ಸಂತೋಷ ಕ್ಷತ್ರಿ ಆಗ್ರಹಿಸಿದ್ದಾರೆ.

ಹೆಸರು ಬೆಳೆ ಸಂಪೂರ್ಣ ಹಾನಿಯಾಗಿರುವುದು
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಉಪ ವಿಭಾಗಾಧಿಕಾರಿಗಳು ತಹಶೀಲ್ದಾರ್ ನೇತೃತ್ವದಲ್ಲಿ ಭೀಮಾ ನದಿ ತೀರದ ಜಮಿನುಗಳಿಗೆ ಖುದ್ದಾಗಿ ಭೇಟಿ ನೀಡಿ ಸರ್ವೇ ಮಾಡಲಾಗಿದೆ. ನದಿ ತೀರ ಹೊರತುಪಡಿಸಿ ಉಳಿದ ಕಡೆ ಅಧಿಕಾರಿಗಳು ಜಂಟಿಯಾಗಿ ಸರ್ವೇ ಮಾಡಲಿದ್ದಾರೆ
ಎಂ.ಎ. ಅತ್ತಾರ ಆಲಮೇಲ ಕಂದಾಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.