ADVERTISEMENT

ಜನಮನ ಸೂರೆಗೊಂಡ ‘ಸಾಂಸ್ಕೃತಿಕ ಸಂಜೆ’ 

ಸಾಹಿತ್ಯ, ಸಂಗೀತ, ಜನಪದ ಕಲೆಗೆ ಪ್ರೋತ್ಸಾಹ ಅಗತ್ಯ; ಡಿಸಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 12:44 IST
Last Updated 4 ಡಿಸೆಂಬರ್ 2022, 12:44 IST
ವಿಜಯಪುರ ನಗರದ ಆನಂದ ಮಹಲ್ ‌ಆವರಣದಲ್ಲಿ ಆಯೋಜಿಸಲಾಗಿದ್ದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮದಲ್ಲಿ ಸೈನಿಕ ಶಾಲೆಯ ವಿದ್ಯಾರ್ಥಿಗಳು ‘ವಾಲ್ಮೀಕಿ ರಾಮಾಯಣ’ ನೃತ್ಯ ರೂಪಕ ಪ್ರದರ್ಶಿಸಿದರು
ವಿಜಯಪುರ ನಗರದ ಆನಂದ ಮಹಲ್ ‌ಆವರಣದಲ್ಲಿ ಆಯೋಜಿಸಲಾಗಿದ್ದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮದಲ್ಲಿ ಸೈನಿಕ ಶಾಲೆಯ ವಿದ್ಯಾರ್ಥಿಗಳು ‘ವಾಲ್ಮೀಕಿ ರಾಮಾಯಣ’ ನೃತ್ಯ ರೂಪಕ ಪ್ರದರ್ಶಿಸಿದರು   

ವಿಜಯಪುರ: ನಗರದ ಐತಿಹಾಸಿಕ ಸ್ಮಾರಕ ಆನಂದ ಮಹಲ್ ‌ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮ ಜನಮನ ಸೂರೆಗೊಂಡಿತು.

ಮೊದಲಿಗೆ ವಿಜಯಪುರದ ಕೃತಿಕಾ ಜಂಗಿಮಠ ಅವರು ಕೊಳಲು ನುಡಿಸಿದರು. ನಂತರ ಕನ್ನಡ ಜನಪ್ರಿಯ ಚಿತ್ರ ಗೀತೆಗಳನ್ನು ತಮ್ಮ ಕೊಳಲ ವಾದನದ ಮೂಲಕ ಅನಾವರಣಗೊಳಿಸಿದರು. ಕೊಳಲಿನ ನಾದದಲ್ಲೇವಿವಿಧ ರೀತಿಯ ಧ್ವನಿಯ ಮಿಮಿಕ್ರಿ ಮಾಡುವ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು.

ಪ್ರಕಾಶ ಸಿಂಗ್ ರಜಪೂತ ಅವರಿಂದ ಕನ್ನಡ ಗಜಲ್ ಗಾಯನ, ಶ್ರೀಶೈಲ ಹೂಗಾರ ಅವರಿಂದ ಹಾಸ್ಯ ಚಟಾಕಿ, ರತ್ನಮಾಲಾ ಡ್ಯಾನ್ಸ್ ಅಕಾಡೆಮಿಯಿಂದ ಸಮೂಹ ನೃತ್ಯ ಹಾಗೂ ಸೈನಿಕ ಶಾಲೆಯ ವಿದ್ಯಾರ್ಥಿಗಳಿಂದ ‘ವಾಲ್ಮೀಕಿ ರಾಮಾಯಣ’ ನೃತ್ಯ ರೂಪಕ ಪ್ರದರ್ಶನ ಜನಮನ ಸೂರೆಗೊಂಡವು.

ADVERTISEMENT

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಅವರು ಹಾಸ್ಯ ಚಟಾಕಿಗಳನ್ನು ಸಾಂದರ್ಭಿಕವಾಗಿ ಹೇಳುವುದರ ಮೂಲಕ ನೆರೆದ ಪ್ರೇಕ್ಷಕರನ್ನು ನಗೆಗಡಲಲಿ ತೇಲಿಸಿದರು.

ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದಜಿಲ್ಲಾಧಿಕಾರಿ ವಿಜಯಮಹಾಂತೇಶ, ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಹಾಗೂ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ತಿಂಗಳ ಮೊದಲನೇ ಶನಿವಾರದಂದು ಆನಂದ ಮಹಲ್ ಸ್ಮಾರಕ ಆವರಣದಲ್ಲಿ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚುವುದಲ್ಲದೇ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯಕಾರಿ. ಭಯ, ಖಿನ್ನತೆ ಹೊಗಲಾಡಿಸಿ, ಆತ್ಮಸ್ಥೈರ್ಯದ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ ಎಂದು ಹೇಳಿದರು.

ನಾಡಿನ ಶ್ರೀಮಂತಿಕೆಯ ಪ್ರತೀಕವಾಗಿರುವ ಸಾಹಿತ್ಯ, ಸಂಗೀತ, ಕಲೆ, ಜನಪದ ಕಲೆ ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರೋತ್ಸಾಹ ಅಗತ್ಯ. ಒತ್ತಡದ ಜೀವನದ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವದು ಅವಶ್ಯಕವಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣನವರ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ್ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.