ವಿಜಯಪುರ: ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ವಿಜಯಪುರ ಸೈಕ್ಲಿಂಗ್ ಗ್ರೂಪ್ದಿಂದ ಕೊರೊನಾ ವಿರುದ್ಧ ಜನ ಜಾಗೃತಿ ಸೈಕಲ್ ಜಾಥಾ ನಡೆಯಿತು.
ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಸೈಕಲ್ ಜಾಥಾಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಚಾಲನೆ ನೀಡಿ, ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ತುಳಿದರು.
‘ಸೈಕಲ್ ದೇಹದ ಆರೋಗ್ಯಕ್ಕೆ ಅತ್ಯತ್ತಮ ಸಾಧನ. ಕೊರೊನಾ ಕಾಯಿಲೆ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸಲು ಇದು ಉತ್ತಮ ವಿಧಾನವಾಗಿದೆ’ ಎಂದು ಹೇಳಿದರು.
ನಗರದ ಹವ್ಯಾಸಿ ಸೈಕ್ಲಿಗಳು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಗರದ ಸಿದ್ದೇಶ್ವರ ದೇವಸ್ಥಾನ, ಗಾಂಧಿವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಆಝಾದ್ ರಸ್ತೆ, ರಾಮಮಂದಿರ ರಸ್ತೆ, ಅಮೀರ್ ಟಾಕೀಸ್ ಮಾರ್ಗವಾಗಿ ಅಕ್ಕಮಹಾದೇವಿ ರಸ್ತೆಯವರೆಗೆ ‘ಸೈಕಲ್ ತುಳಿಯಿರಿ, ಕೊರೊನಾ ಓಡಿಸಿ’, ‘ಸೈಕಲ್ ಬಳಸಿ, ಪರಿಸರ ಉಳಿಸಿ‘, ‘ಭಾರತ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಕೂಗುತ್ತಾ, ಸೈಕಲ್ ಜಾಥಾ ನಡೆಸಿದರು.
ನಂತರ ನಡೆದ ವಿಶ್ವ ಸೈಕಲ್ ದಿನಾಚರಣೆಯನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಉದ್ಘಾಟಿಸಿದರು.
ಸೈಕಲ್ ಬಳಸುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಚೇತೋಹಾರಿಯಾಗಿರಬಹುದು ಎಂದರು.
ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹರ್ಷಗೌಡ ಎಸ್.ಪಾಟೀಲ, ಸಿದ್ಧಸಿರಿ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ, ಡಾ.ಮಹಾಂತೇಶ ಬಿರಾದಾರ, ಪ್ರೇಮಾನಂದ ಬಿರಾದಾರ, ಶಾಂತೇಶ ಕಳಸಗೊಂಡ, ಸೋಮು ಮಠ, ಗುರುಶಾಂತ ಕಾಪಸೆ, ಡಿ.ಕೆ.ತಾವಸೆ, ಮಹಾಂತೇಶ ಬಿಜ್ಜರಗಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.