ವಿಜಯಪುರ: ಇಲ್ಲಿನ ನವಬಾಗ್ ರಸ್ತೆಯಲ್ಲಿ ಎರಡು ದಿನಗಳಿಂದ ಅನ್ನಾಹಾರವಿಲ್ಲದೇ ನಿತ್ರಾಣವಾಗಿ ಬಿದ್ದಿದ್ದ ವೃದ್ಧನನ್ನು ರಕ್ಷಿಸಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್, ವೃದ್ಧನನ್ನು ಅನಾಥ ಆಶ್ರಮಕ್ಕೆ ದಾಖಲಿಸಿ, ಯೋಗಕ್ಷೇಮಕ್ಕೆ ಕ್ರಮಕೈಗೊಂಡು ಮಾನವೀಯತೆ ಮೆರೆದಿದ್ದಾರೆ.
ನವಬಾಗ್ ಮಾರ್ಗವಾಗಿ ವಾಹನದಲ್ಲಿ ತೆರಳುತ್ತಿದ್ದ ಜಿಲ್ಲಾಧಿಕಾರಿಗಳ ಕಣ್ಣಿಗೆ ನಿತ್ರಾಣವಾಗಿ ಮಲಗಿದ್ದ ವೃದ್ಧ ಕಂಡಿದ್ದು, ತಕ್ಷಣ ತಮ್ಮ ಕಾರನ್ನು ನಿಲ್ಲಿಸಿ ವೃದ್ಧನ ಬಳಿಗೆ ತೆರಳಿ ವಿಚಾರಿಸಿದರು. ಬಳಿಕ ನಿರಾಶ್ರಿತರ ಕೇಂದ್ರದ ಅಧಿಕಾರಿ ಹಾಗೂ ವೈದ್ಯರಿಗೆ ಸ್ಥಳಕ್ಕೆ ಬರುವಂತೆ ಸೂಚಿಸಿದರು.
ಅಧಿಕಾರಿ, ವೈದ್ಯರು ಬರುವವರೆಗೂ ಜಿಲ್ಲಾಧಿಕಾರಿಗಳು ತಾವೇ ಖುದ್ದು ವೃದ್ಧನಿಗೆ ಗ್ಲುಕೋಸ್ ನೀಡಿ, ಬ್ರೆಡ್ ತಿನ್ನಿಸಿ ಸಂತೈಸಿದರು. ಚೇತರಿಸಿಕೊಂಡ ವೃದ್ದ ‘ಬಡೇ ಸಾಬ್ ಕೋ ಮೇರಾ ಧನ್ಯವಾದ, ಭಗವಾನ್ ಉನ್ಕೋ ಖುಷ್ ರಖೇ’ ಎಂದು ಜಿಲ್ಲಾಧಿಕಾರಿಗಳಿಗೆ ಕೈ ಮುಗಿದನು. ಸ್ಥಳಕ್ಕೆ ಬಂದ ಅಧಿಕಾರಿಗಳು, ವಾಹನದಲ್ಲಿ ವೃದ್ಧನನ್ನು ಅನಾಥ ಆಶ್ರಮಕ್ಕೆ ಸಾಗಿಸಿ, ಆರೈಕೆ ಮಾಡಿದರು. ವೃದ್ಧನ ಊರು ಯಾವುದು, ಹೆಸರು ಏನೆಂಬ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.