ವಿಜಯಪುರ:ಜಿಲ್ಲೆಯಲ್ಲಿ ಕೋವಿಡ್ನಿಂದ ಸಂಭವಿಸಿರುವ ಸಾವಿನ ಪ್ರಕರಣಗಳನ್ನು ವಿಶ್ಲೇಷಿಸಿದಾಗ ಬಹುತೇಕ ಪ್ರಕರಣಗಳಲ್ಲಿ ರೋಗಿಗಳು, ರೋಗವು ಉಲ್ಬಣಗೊಂಡ ನಂತರ ಆಸ್ಪತ್ರೆಗಳಿಗೆ ದಾಖಲಾಗಿರುವುದು ಕಂಡುಬಂದಿದೆ ಎಂದುಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್-19 ರೋಗಕ್ಕೆ ಗುರುತಿಸಿರುವ ಆಸ್ಪತ್ರೆಗಳಿಗೆ ದಾಖಲಾಗದೇ ನೋಂದಾಯಿತರಲ್ಲದ ಖಾಸಗಿ ವೈದ್ಯ ವೃತ್ತಿ ನಿರತರಿಂದ ಚಿಕಿತ್ಸೆ ಪಡೆಯುತ್ತಿರುವುದು ಗಮನಕ್ಕೆ ಬಂದಿರುತ್ತದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರು ಕೋವಿಡ್-19 ಲಕ್ಷಣಗಳು ಕಂಡುಬಂದ ತಕ್ಷಣ ಈ ರೋಗದ ಚಿಕಿತ್ಸೆಗಾಗಿ ಇರುವಸರ್ಕಾರಿ ಜಿಲ್ಲಾ ಆಸ್ಪತ್ರೆ ಹಾಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.
ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಶ್ವಾಸಕೋಶ ಮತ್ತು ಮೂತ್ರಕೋಶದ ಕಾಯಿಲೆಯಿಂದ ಬಳಲುತ್ತಿರುವವರು ರೋಗದ ಆರಂಭಿಕ ಹಂತದಲ್ಲಿಯೇ ಆಸ್ಪತ್ರೆಗಳಿಗೆ ದಾಖಲಾಗಬೇಕು ಎಂದು ಅವರು ತಿಳಿಸಿದ್ದಾರೆ.
ನೋಂದಾಯಿತರಲ್ಲದ ವೈದ್ಯರು ಈ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಂಡುಬಂದಲ್ಲಿ ಸಾಂಕ್ರಾಮಿಕ ರೋಗಿಗಳ ಕಾಯ್ದೆಯ ಪ್ರಕಾರ ಕ್ರಮಕೈಗೊಳ್ಳುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 7572 ಜನರಿಗೆಕೋವಿಡ್ ಪಾಸಿಟಿವ್ ದೃಡಪಟ್ಟಿದೆ ಹಾಗೂ 130 ಜನ ಸಾವಿಗೀಡಾಗಿದ್ದಾರೆ ಎಂದು ಹೇಳಿದರು.
ತಾಲ್ಲೂಕುವಾರುವಿವರ:ವಿಜಯಪುರ 3,736, ಬಸವನ ಬಾಗೇವಾಡಿ 790, ಬಬಲೇಶ್ವರ 67, ಚಡಚಣ 47, ದೇವರಹಿಪ್ಪರಗಿ 67, ಇಂಡಿ 693, ಕೊಲ್ಹಾರ 86, ಮುದ್ದೇಬಿಹಾಳ 783, ನಿಡಗುಂದಿ 65, ಸಿಂದಗಿ 671, ತಾಳಿಕೋಟೆ 253, ತಿಕೋಟಾ 83 ಮತ್ತಾತು ಇತರೆ 231 ಸೇರಿದಂತೆ ಇದುವರೆಗೆ 7,572 ಜನರಿಗೆ ಕೋವಿಡ್ ಪಾಸಿಟಿವ್ ದೃಡಪಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.