ADVERTISEMENT

ವಿಜಯಪುರ ಜಿಲ್ಲೆಯಲ್ಲಿ ಐದು ಸಾವಿರ ಸಮೀಪಿಸಿದ ಕೋವಿಡ್‌ ಪೀಡಿತರ ಸಂಖ್ಯೆ

ವಿಜಯಪುರ ಜಿಲ್ಲೆಯಲ್ಲಿ ಕೋವಿಡ್‌ನಿಂದ 57 ಜನ ಸಾವು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 19:30 IST
Last Updated 17 ಆಗಸ್ಟ್ 2020, 19:30 IST
ಕೋವಿಡ್ ಪಾಸಿಟಿವ್ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ವಿಜಯಪುರ ಜಿಲ್ಲಾಡಳಿತ ಅಭಿವೃದ್ಧಿಪಡಿಸಿರುವ ವಿನೂತನ ಆ್ಯಪ್‌ ಅನ್ನು ಜಿಲ್ಲಾಧಿಕಾರಿ ಸುನೀಲ್ ಕುಮಾರ್‌ ಬಿಡುಗಡೆ ಮಾಡಿದರು. ಜಿ.ಪಂ. ಸಿಇಒ ಗೋವಿಂದ ರೆಡ್ಡಿ, ಆಯುಕ್ತ ಶ್ರೀಹರ್ಷ ಶೆಟ್ಟಿ ಇದ್ದಾರೆ
ಕೋವಿಡ್ ಪಾಸಿಟಿವ್ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ವಿಜಯಪುರ ಜಿಲ್ಲಾಡಳಿತ ಅಭಿವೃದ್ಧಿಪಡಿಸಿರುವ ವಿನೂತನ ಆ್ಯಪ್‌ ಅನ್ನು ಜಿಲ್ಲಾಧಿಕಾರಿ ಸುನೀಲ್ ಕುಮಾರ್‌ ಬಿಡುಗಡೆ ಮಾಡಿದರು. ಜಿ.ಪಂ. ಸಿಇಒ ಗೋವಿಂದ ರೆಡ್ಡಿ, ಆಯುಕ್ತ ಶ್ರೀಹರ್ಷ ಶೆಟ್ಟಿ ಇದ್ದಾರೆ   

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಐದು ಸಾವಿರ ಸಮೀಪಿಸಿದೆ. ಸೋಮವಾರ ಸಂಜೆ ವರೆಗೆ 4,977ಕ್ಕೆ ತಲುಪಿದ್ದು, ಮಂಗಳವಾರ ಐದು ಸಾವಿರ ಗಡಿ ತಲುಪುವುದು ನಿಶ್ಚಿತವಾಗಿದೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್‌ನಿಂದ 57 ಜನ ಸಾವಿಗೀಡಾಗಿದ್ದಾರೆ.

ಸೋಮವಾರ ಜಿಲ್ಲೆಯಲ್ಲಿ ಹೊಸದಾಗಿ 107 ಜನರಿಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದ್ದು, ಮೂವರು ಸಾವಿಗೀಡಗಿದ್ದಾರೆ.

ತಾಲ್ಲೂಕುವಾರು ವಿವರ:

ADVERTISEMENT

ವಿಜಯಪುರ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂದರೆ, 2,856 ಜನರಿಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದೆ. ಉಳಿದಂತೆ ಬಸವನ ಬಾಗೇವಾಡಿ 487, ಬಬಲೇಶ್ವರ 65, ಚಡಚಣ 35, ದೇವರ ಹಿಪ್ಪರಿ 59, ಇಂಡಿ 377, ಕೊಲ್ಹಾರ 57, ಮುದ್ದೇಬಿಹಾಳ 389, ನಿಡಗುಂದಿ 35, ಸಿಂದಗಿ 319, ತಾಳಿಕೋಟೆ 198, ತಿಕೋಟಾ 76 ಹಾಗೂ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರೆ ಜಿಲ್ಲೆಯವರು 24 ಜನ ಸೇರಿದಂತೆ ಒಟ್ಟು 4,977 ಜನರಿಗೆ ಕೋವಿಡ್ ದೃಢಪಟ್ಟಿದೆ.

‘ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ನೀಡಿ’

ವಿಜಯಪುರ: ಕೋವಿಡ್ ಸೋಂಕಿತ ಗರ್ಭೀಣಿ ಮಹಿಳೆಯರಿಗೆ ಆದ್ಯತೆ ಮೇರೆಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸ್ತ್ರೀ ರೋಗ ತಜ್ಞರು, ಪ್ರಸೂತಿ ತಜ್ಞರು ಹಾಗೂ ಅರವಳಿಕೆ ತಜ್ಞರ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್-19 ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಅಥವಾ ತಿರಸ್ಕರಿಸುವರ ವಿರುದ್ಧ ಕೆ.ಪಿ.ಎಂ.ಇ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.

ಬಿ.ಪಿ.ಎಲ್ ಮತ್ತು ಎ.ಪಿ.ಎಲ್ ಕಾರ್ಡ್‌ ಹೊಂದಿದ ಕೋವಿಡ್-19 ಸೋಂಕಿತ ರೋಗಿಗಳ ಪ್ರಕರಣಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಅಡಿಯಲ್ಲಿ ಅಪ್‌ಲೋಡ್‌ ಮಾಡುವಂತೆ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ಮತ್ತು ಅರವಳಿಕೆ ತಜ್ಞವೈದ್ಯರ ಕೊರತೆ ಇದ್ದ ಸಂದರ್ಭದಲ್ಲಿ ಖಾಸಗಿ ತಜ್ಞವೈದ್ಯರು ಜಿಲ್ಲಾಸ್ಪತ್ರೆಗೆ ಸಕಾಲಕ್ಕೆ ತೆರಳಿ ತಮ್ಮ ಸೇವೆ ಕಲ್ಪಿಸುವಂತೆ ತಿಳಿಸಿದರು.

ಕೋವಿಡ್‌: ವಿನೂತನ ಆ್ಯಪ್ ಬಿಡುಗಡೆ

ವಿಜಯಪುರ: ಕೋವಿಡ್ ಪಾಸಿಟಿವ್ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಅನುಕೂಲವಾಗುವಂತೆ ಮತ್ತು ತಕ್ಷಣ ಚಿಕಿತ್ಸಾ ಹಾಸಿಗೆಗಳ ಅಂಕಿ-ಅಂಶ ಲಭ್ಯವಾಗಲು ವಿನೂತನ ಆ್ಯಪ್‌ವೊಂದನ್ನು ಜಿಲ್ಲಾಡಳಿತ ಅಭಿವೃದ್ಧಿಪಡಿಸಿದೆ.

ವಿನೂತನ ಆ್ಯಪ್‌ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಸುನೀಲ್ ಕುಮಾರ್‌, ಜಿಲ್ಲಾಸ್ಪತ್ರೆ, ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಲಭ್ಯವಿರುವ ಖಾಲಿ ಹಾಸಿಗೆಗಳ ಮಾಹಿತಿ ಈ ಆ್ಯಪ್ ಮೂಲಕ ಲಭ್ಯವಾಗಲಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪಸೆ, ಜಿಲ್ಲಾಸ್ಪತ್ರೆ ಸರ್ಜನ್ ಡಾ. ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣವರ, ಡಾ.ಮಲ್ಲನಗೌಡ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.