ADVERTISEMENT

ಕೋವಿಡ್‌ ಸಾವು; ಪ್ರತಿದಿನ ವರದಿ ನೀಡಿ

ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಮೇ 2021, 15:13 IST
Last Updated 18 ಮೇ 2021, 15:13 IST
ವಿಜಯಪುರದ ನೇಮಗೌಡ ಆಸ್ಪತ್ರೆಗೆ ಮಂಗಳವಾರ ವಿಶೇಷ ತಜ್ಞರ ಸಮಿತಿಯೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಪರಿಶೀಲನೆ ನಡೆಸಿದರು
ವಿಜಯಪುರದ ನೇಮಗೌಡ ಆಸ್ಪತ್ರೆಗೆ ಮಂಗಳವಾರ ವಿಶೇಷ ತಜ್ಞರ ಸಮಿತಿಯೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಪರಿಶೀಲನೆ ನಡೆಸಿದರು   

ವಿಜಯಪುರ: ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸುವ ಎಲ್ಲ ಬಗೆಯ ಸಾವುಗಳ ಕುರಿತು ಅದೇ ದಿನವೇ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಸೂಚಿಸಿದರು.

ನಗರದ ನೇಮಗೌಡ ಆಸ್ಪತ್ರೆಗೆ ಮಂಗಳವಾರವಿಶೇಷ ತಜ್ಞರ ಸಮಿತಿಯೊಂದಿಗೆ ಭೇಟಿ ನೀಡಿ ಡೆತ್ ಆಡಿಟ್ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಆಸ್ಪತ್ರೆಗೆ ದಾಖಲಾದ ತೀವ್ರತರನಾದ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಿ, ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ತಿಳಿಸಿದರು.

ಆಕ್ಸಿಜನ್ ದಾಸ್ತಾನನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಕ್ಸಿಜನ್ ಕೊರತೆಯಿಂದಾಗಿ ಯಾವುದೇ ರೋಗಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಜಿಲ್ಲಾಡಳಿತದೊಂದಿಗೆ ಆಕ್ಸಿಜನ್ ಏಜೆನ್ಸಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಸೂಚಿಸಿದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ‍ಸೆ, ಜಿಲ್ಲೆಯಲ್ಲಿ ಇದುವರೆಗೆ 36 ಕಪ್ಪು ಶಿಲೀಂಧ್ರ ಪ್ರಕರಣಗಳು ಕಂಡುಬಂದಿವೆ ಎಂದು ತಿಳಿಸಿದರು.

ರೋಗನಿರೋಧಕ ಶಕ್ತಿ ಕಡಿಮೆಯಾದ ವ್ಯಕ್ತಿಗಳಿಗೆ ಕಪ್ಪು ಶಿಲೀಂಧ್ರ ರೋಗವು ಕಂಡುಬರುತ್ತಿದೆ. ಕಪ್ಪು ಶಿಲೀಂಧ್ರ ಪೀಡಿತರು ಬಿ.ಎಲ್. ಡಿ.ಇ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿರಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ರೆಮ್‌ ಡಿಸಿವಿರ್‌ ಇಂಜೆಕ್ಷನ್ ಕೊರತೆಯಾಗದಂತೆ ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶರಣಪ್ಪ ಕಟ್ಟಿ, ಡಾ.ಸಂತೋಷ್ ನೇಮಗೌಡ, ಡಾ. ರಾಜೇಂದ್ರಕುಮಾರ್, ಡಾ. ಎಸ್.ಎಲ್. ಲಕ್ಕಣ್ಣವರ, ಡಾ.ಸಂತೋಷ ನಂದಿ, ಪೀಟರ್ ಅಲೆಗ್ಸಾಂಡರ್ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.