ADVERTISEMENT

ವಿಜಯಪುರ: ಸರ್ಕಾರಿ ಹುದ್ದೆ ಭರ್ತಿಗೆ ಯುವಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 7:41 IST
Last Updated 1 ಅಕ್ಟೋಬರ್ 2025, 7:41 IST
ವಿಜಯಪುರ ನಗರದಲ್ಲಿ ಮಂಗಳವಾರ ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ಯುವಜನನಾಕ್ರೋಶ ರ‍್ಯಾಲಿ ನಡೆಯಿತು 
ವಿಜಯಪುರ ನಗರದಲ್ಲಿ ಮಂಗಳವಾರ ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ಯುವಜನನಾಕ್ರೋಶ ರ‍್ಯಾಲಿ ನಡೆಯಿತು    

ವಿಜಯಪುರ: ಖಾಲಿಯಿರುವ ಸರ್ಕಾರಿ ಉದ್ಯೋಗಕ್ಕೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ನಗರದಲ್ಲಿ ಮಂಗಳವಾರ ಯುವಜನನಾಕ್ರೋಶ ಹೋರಾಟ ನಡೆಯಿತು.

ನಗರದ ಗಾಂಧಿ ಚೌಕಿಯಿಂದ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದ ನಡೆದ ರ‍್ಯಾಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು, ಉದ್ಯೋಗ ನೇಮಕಾತಿಗೆ ಆಗ್ರಹಿಸಿದರು.

ಡಿವಿಪಿ ರಾಜ್ಯ ಘಟಕದ ಅಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, ನಾಡಿನಾದ್ಯಂತ ವಿದ್ಯಾರ್ಥಿ ಯುವಜನರ ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ಹಿಂದಿನ ಬಿಜೆಪಿ, ಈಗಿನ ಕಾಂಗ್ರೆಸ್ ಸರ್ಕಾರ ಸೇರಿದಂತೆ ನಾಲ್ಕು ವರ್ಷದಿಂದ ಯಾವುದೇ ಸರ್ಕಾರಿ ಹುದ್ದೆಗಳನ್ನು ತುಂಬದೇ ಸತಾಯಿಸುತ್ತಿರುವುದು ಖಂಡನೀಯ ಎಂದರು.

ADVERTISEMENT

ವಿದ್ಯಾರ್ಥಿ, ಯುವ ಜನರು ನೌಕರಿ ಪಡೆಯಬೇಕೆನ್ನುವ ಉದ್ದೇಶದಿಂದ ಹಗಲು ರಾತ್ರಿ ಕಷ್ಟಪಟ್ಟು ಶ್ರಮಪಡುತ್ತಿದ್ದಾರೆ.  ಆದರೆ, ಸರ್ಕಾರ ಅವರ ಕಷ್ಟಕ್ಕೆ ಪ್ರತಿಫಲವಾಗಿ ಉದ್ಯೋಗ ನೀಡದೆ ಅವರ ಜೀವನವನ್ನು ಹಾಳು ಮಾಡುತ್ತಿರುವುದು ಖಂಡನೀಯ ಎಂದರು.

ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಟಧಿಕಾರಿ ಲಕ್ಷ್ಮಣ ನಿಂಬರಗಿ ಮನವಿ ಸ್ವೀಕರಿಸಿದರು.  

ದಲಿತ ವಿದ್ಯಾರ್ಥಿ ಪರಿಷತ್ತಿನ ಮುಖಂಡರಾದ ಹುಚ್ಚಪ್ಪ ಸಿಂದಗಿ, ಮಂಜುನಾಥ, ಉಪಾಧ್ಯಕ್ಷ ಮಾದೇಶ ಚಲವಾದಿ, ಪ್ರತಾಪ ತೋಳನೂರ, ಪ್ರಶಾಂತ ದಾಂಡೇಕರ, ರಾಹುಲ ಕಳಸದ, ಯಮನೂರಿ ಮಾದರ, ಭೀಮು, ಮಂಜುನಾಥ ಎಲ್., ಶಿಲ್ಪಾ ಮುಂತಾದವರು ಭಾಗವಹಿಸಿದ್ದರು.

ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಒಂದು ವಾರದಲ್ಲಿ ನೋಟಿಫಿಕೇಶನ್ ಮಾಡಬೇಕು   
ಶ್ರೀನಾಥ ಪೂಜಾರಿಅಧ್ಯಕ್ಷ ಡಿವಿಪಿ ರಾಜ್ಯ ಘಟಕ
‘ಆಕಾಂಕ್ಷಿಗಳಿಗೆ ಸರ್ಕಾರದಿಂದ ಅನ್ಯಾಯ’
ದಲಿತ ವಿದ್ಯಾರ್ಥಿ ಪರಿಷತ್ ಸುಮಾರು ನಿರುದ್ಯೋಗಿ ಯುವಕರ ಪರವಾಗಿ ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದೆ. ಆದರೆ ನಮ್ಮನ್ನಾಳುವ ಸರ್ಕಾರಗಳು ನಮ್ಮ ಕಷ್ಟಗಳನ್ನ ಅರ್ಥಮಾಡಿಕೊಳ್ಳದೆ ಇವತ್ತು ಬೀದಿಯಲ್ಲಿ ನಿಲ್ಲಿಸುವ ರೀತಿಯಲ್ಲಿ ನಮ್ಮನ್ನ ನೋಡಿಕೊಳ್ಳುತ್ತಿದ್ದಾರೆ ಇದರಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಡಿವಿಪಿ ಜಿಲ್ಲಾ ಸಂಚಾಲಕ ಅಕ್ಷಯ ಕುಮಾರ ಅಜಮನಿ ಹೇಳಿದರು. ವಿದ್ಯಾರ್ಥಿ ಯುವ ಜನರು ತಮ್ಮ ಊರನ್ನು ಬಿಟ್ಟು ಸಂಬಂಧಿಕರನ್ನು ಬಿಟ್ಟು ತಂದೆ-ತಾಯಿ ಎಲ್ಲರನ್ನೂ ಬಿಟ್ಟು ನಗರಗಳಿಗೆ ಬಂದು ನಾನೇನಾದರೂ ಒಂದು ಸರ್ಕಾರಿ ಹುದ್ದೆಗಳನ್ನು ಪಡೆದು ಸಾಧನೆ ಮಾಡಬೇಕೆನ್ನುವ ಹಂಬಲದಲ್ಲಿರುವ ಉದ್ಯೋಗ ಆಕಾಂಕ್ಷಿಗಳಿಗೆ ಈಗಿನ ಸರ್ಕಾರಗಳು ಉದ್ಯೋಗ ನೀಡದೆ ಸತಾಯಿಸುತ್ತಿರುವುದು ಮತ್ತು ಅವರ ಜೀವನವನ್ನು ನಾಶ ಮಾಡುತ್ತಿರುವುದು ಖಂಡನೀಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.