ವಿಜಯಪುರ: ಹೊರರಾಜ್ಯಗಳಿಂದ ರಾಜ್ಯಕ್ಕೆ ಸುಮಾರು 56 ಸಾವಿರ ಜನರು ಆಗಮಿಸಲು ಸೇವಾ ಸಿಂಧು ಆ್ಯಪ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಧೂಳಖೇಡ ಮತ್ತು ನಿಡಗುಂದಿ ಚೆಕ್ ಪೋಸ್ಟ್ನಲ್ಲಿ ಕಟ್ಟೆಚ್ಚರ ವಹಿಸುವಂತೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರ ಇ-ಪಾಸ್ಗಳ ಖಚಿತತೆ ಬಗ್ಗೆ ಪರಿಶೀಲಿಸಬೇಕು. ಪ್ರಯಾಣಿಕರ ಆರೋಗ್ಯ ತಪಾಸಣೆಗೆ ವೈದ್ಯರೊಬ್ಬರ ಜೊತೆಗೆ ಸಿಬ್ಬಂದಿ ನಿಯೋಜಿಸಬೇಕು ಎಂದರು.
ಪ್ರಯಾಣಿಕರ ಪರಿಶೀಲನೆಗೆ 8ಕ್ಕೂ ಹೆಚ್ಚು ಕೌಂಟರ್ ಸ್ಥಾಪಿಸಬೇಕು. ಪ್ರಯಾಣಿಕರ ಆರೋಗ್ಯ ತಪಾಸಣೆಗಾಗಿ ಥರ್ಮಲ್ ಸ್ಕ್ಯಾನರ್ನೊಂದಿಗೆ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಹೇಳಿದರು.
ಚೆಕ್ಪೋಸ್ಟ್ಗೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ ತಪ್ಪದೇ ಸೀಲ್ ಹಾಕಬೇಕು. ಗ್ರಾಮಾಂತರ ಪ್ರದೇಶದವರನ್ನು ಸಮೀಪದ ಶಾಲೆ ಅಥವಾ ವಸತಿ ಶಾಲೆಗಳಲ್ಲಿ ಅವಶ್ಯಕ ಮೂಲ ಸೌಕರ್ಯಗಳೊಂದಿಗೆ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇಡಬೇಕು. ನಗರ ಪ್ರದೇಶದವರನ್ನು ಹೋಂಕ್ವಾರಂಟೈನ್ಗೊಳಿಸಬೇಕು ಎಂದರು.
ಕೋವಿಡ್-19 ಲಕ್ಷಣ ಇಲ್ಲದ ದ್ವಿತೀಯ ವರ್ಗದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡುವುದರ ಜೊತೆಗೆ 12ನೇ ದಿನದಂದು ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಬೇಕು. ತೃತೀಯ ವರ್ಗದ ಪ್ರಯಾಣಿಕರನ್ನು ಹೋಂಕ್ವಾರಂಟೈನ್ಗೊಳಿಸುವುದರ ಜೊತೆಗೆ ನೆರೆಹೊರೆಯವರನ್ನು ಕಣ್ಗಾವಲು ಇಡುವ ಬಗ್ಗೆ ನೋಟಿಸ್ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಖಾಸಗಿ ವಾಹನದಿಂದ ಅಂತರ್ರಾಜ್ಯ ಪ್ರಯಾಣಕ್ಕೆ ಹೋಗುವವರಿಗೆ ಇ-ಪಾಸ್ ಆಧಾರದ ಮೇಲೆ ಚೆಕ್ಪೋಸ್ಟ್ನಲ್ಲಿ ಅನುಮತಿ ಕಲ್ಪಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶಟ್ಟಿ, ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಸ್ನೆಹಲ್ ಲೊಖಂಡೆ, ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ, ಜಿಲ್ಲಾ ಆರೋಗ್ಯಾಧಿಕಾರಿ ಮಹೇಂದ್ರ ಕಾಪ್ಸೆ ಸಭೆಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.