ಹೊರ್ತಿ: ಸಮೀಪದ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಭಾವೈಕ್ಯ ತಾಣ ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ಶುಕ್ರವಾರ ಹಿರಿಯ ನಟ ದೊಡ್ಡಣ್ಣ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ಅಹಂಕಾರ ಬಿಟ್ಟಾಗ ಆತ್ಮ ಸಾಕ್ಷಾತ್ಕಾರವಾಗುವುದು. ಮೊಬೈಲ್ ಗೀಳಿನಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಓದುವ ರೂಢಿ ಬೆಳೆಸಿಕೊಳ್ಳಬೇಕು’ ಎಂದರು.
ಇಲ್ಲಿನ ಸ್ವಾತಂತ್ರ್ಯ ಸೇನಾನಿ ಮುರುಗೋಡ ಮಹಾದೇವರ ಹಾಗೂ ಭಾವೂಸಾಹೇಬರ, ಗಿಮಲ್ಲೇಶ್ವರ ಮಹಾರಾಜರ ದೇವಸ್ಥಾನಗಳ ಕತೃ ಗದ್ದುಗೆಗಳ ದರ್ಶನ ಪಡೆದರು. ಮಠದ ಪೀಠಾಧಿಪತಿ ರೇವಣಸಿದ್ಧೇಶ್ವರ ಮಹಾರಾಜರಿಗೆ ಸನ್ಮಾನಿಸಿದರು. ಕೆಲ ಕಾಲ ಮಠದ ಕುರಿತು, ಸಂತ-ಮಹಂತರ, ಗುರು ಮಹಾರಾಜರ ಹಾಗೂ ಅಧ್ಯಾತ್ಮ ಚಿಂತನ-ಮಂಥನದ ಮಹತ್ವದ ಕುರಿತು ಮತ್ತು ಆತ್ಮಜ್ಞಾನಿ, ಸ್ವಾತಂತ್ರ್ಯ ಸೇನಾನಿ ಮುರಗೋಡ ಮಹಾದೇವರ ಸ್ವಾತಂತ್ರ್ಯ ಚಳವಳಿಯಲ್ಲಿನ ಪ್ರಮುಖ ಪಾತ್ರದ ಕುರಿತು ಚರ್ಚೆ ನಡೆಸಿದರು. ಈ ವೇಳೆ ರೇವಣಸಿದ್ಧೇಶ್ವರ ಶ್ರೀ ದೊಡ್ಡಣ್ಣ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕ ಮಾಧವಾನಂದ ಶೇಗುಣಸಿ, ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ, ಮಲ್ಲಿಕಾರ್ಜುನ ಕಾಲತಿಪ್ಪಿ, ಪ್ರಕಾಶ ಕಾಲತಿಪ್ಪಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.