ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸಂಭವಿಸಿರುವ ಭೂಕಂಪದ ಬಗ್ಗೆ ವೈಜ್ಞಾನಿಕ ಮಾಹಿತಿ ಕಲೆ ಹಾಕಲುನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರ ತಂಡವು ಜಿಲ್ಲೆಗೆ ಸೋಮವಾರ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಿತು.
ವಿಜಯಪುರ ನಗರದ ಕೀರ್ತಿನಗರ, ಟೇಕಡೆಗಲ್ಲಿ, ಟಕ್ಕೆ ಪ್ರದೇಶಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು. ಎಷ್ಟು ಹೊತ್ತಿಗೆ ಭೂಕಂಪನವಾಯಿತು? ಯಾವ ರೀತಿ ಶಬ್ಧ ಹೊರಹೊಮ್ಮಿತು? ಭೂಮಿ ಕಂಪಿಸಿದ ಅನುಭವವಾಯಿತೇ? ಮನೆಗಳಲ್ಲಿ ವಸ್ತುಗಳು ಉರುಳಿ ಬಿದ್ದವೇ? ಎಷ್ಟು ಭಾರಿ ಭೂಕಂಪನವಾಯಿತು? ಎಂಬಿತ್ಯಾದಿ ಪ್ರಶ್ನೆಗಳನ್ನು ಸಾರ್ವಜನಿಕರಿಗೆ ಕೇಳಿ ಮಾಹಿತಿ ಪಡೆದುಕೊಂಡರು.
ಬಳಿಕ ತಿಕೋಟಾ, ಬಬಲೇಶ್ವರಕ್ಕೆ ತೆರಳಿ ಅಲ್ಲಿಯೂ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದರು. ರಿಕ್ಟರ್ ಮಾಪನದಲ್ಲಿ ದಾಖಲಾಗಿರುವ ಭೂಕಂಪನದ ದತ್ತಾಂಶಗಳೊಂದಿಗೆ ಸಾರ್ವಜನಿಕರು ನೀಡಿದ ಮಾಹಿತಿಯನ್ನು ವಿಶ್ಲೇಷಣೆ ಮಾಡಿದರು. ಮಂಗಳವಾರವೂ ತಜ್ಞರ ತಂಡವು ಜಿಲ್ಲೆಯ ಇತರೆ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ. ಬಳಿಕ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದೆ.
ಬೆಂಗಳೂರು ಮತ್ತು ಕಲಬುರ್ಗಿಯಿಂದ ಆಗಮಿಸಿದ್ದ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರ ತಂಡದವರೊಂದಿಗೆ ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ವಿಜಯಪುರ ತಹಶೀಲ್ದಾರ್ ಸಿದ್ದರಾಯ ಬೋಸಗಿಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.