ADVERTISEMENT

ರಾಹುಲ್ ಗಾಂಧಿ ಕಾರ್ಯಕ್ಕೆ ಮಾಜಿ ಸಚಿವ ಈಶ್ವರಪ್ಪ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 13:12 IST
Last Updated 13 ಅಕ್ಟೋಬರ್ 2022, 13:12 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ವಿಜಯಪುರ: ‘ಕಾಂಗ್ರೆಸ್‌ನ ಭಾರತ್‌ ಜೋಡೊ ಪಾದಯಾತ್ರೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರ ಶೂ ಲೇಸ್‌ ಬಿಚ್ಚಿದಾಗ ರಾಹುಲ್‌ ಗಾಂಧಿ ಅವರು ಕೆಳಗೆ ಕುಳಿತು ಲೇಸ್‌ ಕಟ್ಟಿರುವುದು ಇಡೀ ದೇಶ ನೋಡಿತು. ಇದು ನನಗೂ ಮೆಚ್ಚುಗೆಯಾಯಿತು’ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಶ್ಲಾಘಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್‌ ಜೋಡೊದಿಂದ ಕಾಂಗ್ರೆಸ್‌ಗೆ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದರು.

ಯಾವ ಲೆಕ್ಕ

‘ಮೋದಿ ವಿಶ್ವ ಗುರು ಅಲ್ಲ, ಪುಕ್ಕಲು ಗುರು’ ಎನ್ನುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನಕ್ಕೆ ಕೇಳಿ ಮೋದಿ ಯಾವ ಗುರು ಅಂತ ಹೇಳುತ್ತಾರೆ. ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ಮಾಡಿದ ಮೇಲೆ ಅಂದಿನಿಂದ ಇಂದಿನವರೆಗೆ ಒಂದೇ ಒಂದು ಹೆಜ್ಜೆ ಮುಂದೆ ಬಂದಿಲ್ಲ. ಪುಕ್ಕಲು ಯಾರು ಅನ್ನೋದು ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನವೇ ಮೋದಿಗೆ ಹೆದರಬೇಕಾದರೇ ಇನ್ನು ಸಿದ್ದರಾಮಯ್ಯ ಯಾವ ಲೆಕ್ಕ ಎಂದರು.

ADVERTISEMENT

ಶೀಘ್ರ ಸಚಿವ

ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ನಾನು ಶೀಘ್ರದಲ್ಲೇ ಸಚಿವನಾಗುವ ವಿಶ್ವಾಸ ಇದೆ. ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನ್ನ ಜತೆ ಮಾತುಕತೆ ನಡೆಸಿದ್ದಾರೆ. ಈ ಸಂಬಂಧ ಹೈಕಮಾಂಡ್‌ ಸೂಕ್ತ ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.