ತಾಳಿಕೋಟೆ: ತಾಲ್ಲೂಕಿನ ಹರನಾಳ ಗ್ರಾಮದಲ್ಲಿ ಯುವಕನೊಬ್ಬ ಡೋಣಿ ನದಿ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ತನ್ನೆರಡು ಎತ್ತುಗಳನ್ನು ರಕ್ಷಿಸಿ ಸಾಹಸ ಮೆರೆದಿದ್ದಾರೆ.ಈ ಘಟನೆ ಸೋಮವಾರ ನಡೆದಿದೆ.
ರೈತ ಮಾಳಪ್ಪ ಬಿರಾದಾರ ಡೋಣಿ ನದಿಗೆ ತನ್ನೆರಡು ಎತ್ತುಗಳನ್ನು ಸ್ನಾನ ಮಾಡಿಸಲೆಂದು ಕರೆದೊಯ್ದ ಸಂದರ್ಭದಲ್ಲಿ ತುಂಬಿ ಹರಿಯುತ್ತಿದ್ದ ಡೋಣಿ ನದಿಯ ಪ್ರವಾಹದ ಸೆಳೆತಕ್ಕೆ ಸಿಲುಕಿವೆ. ಆದರೆ, ಜೀವನಕ್ಕೆ ಆಸರೆಯಾದ ಎತ್ತುಗಳನ್ನು ದೂರಮಾಡಿಕೊಳ್ಳಲು ಇಚ್ಚಿಸದ ರೈತ ಮಾಳಪ್ಪ ಬಿರಾದಾರ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕೊಚ್ಚಿ ಹೋಗುತ್ತಿದ್ದ ಎತ್ತುಗಳ ಹಿಂದೆ ಈಜುತ್ತ ಬೆಂಬತ್ತಿ ಒಂದರ ನಂತರ ಒಂದರಂತೆ ಎರಡೂ ಎತ್ತುಗಳನ್ನು ಸಂರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಘಟನೆಯನ್ನು ಕಣ್ಣಾರೆ ಕಂಡ ಗ್ರಾಮಸ್ಥರು, "ಮಾಳಪ್ಪ ಬಿರಾದಾರನ ಈ ಸಾಹಸಕ್ಕೆ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಗ್ರಾಮದ ಮುತ್ತು ಚಳ್ಳಗಿ, ಹನುಮಂತರಾಯ ಬಿರಾದಾರ, ಮಲ್ಲಣ್ಣ ಚಳ್ಳಗಿ, ವೆಂಕಪ್ಪ ಯಡಹಳ್ಳಿ, ಶಂಕ್ರಪ್ಪ ಚಳ್ಳಗಿ, ಈರಪ್ಪ ಅಂಬಳನೂರ, ಭೀಮಾಶಂಕರ ತುಂಬಗಿ, ತಾಳಿಕೋಟಿ ಸಾಮಾಜಿಕ ಕಾರ್ಯಕರ್ತೆಯರಾದ ತಾರಾಬಾಯಿ ಹಜೇರಿ, ಮೀನಾಕ್ಷಿ ರಜಪೂತ ಮತ್ತಿತರರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.