
ನಾಲತವಾಡ: ಪಟ್ಟಣದ ರೈತರ ಜಮೀನೊಂದರಲ್ಲಿ ನಡೆದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹಲವು ರೈತರು ಬೆಳೆದ ಅಪಾರ ಪ್ರಮಾಣದ ಕಬ್ಬು, ಜೋಳದ ತೆನೆಗಳು, ಸಜ್ಜೆ ತೆನೆಗಳು, ದವಸ ಧಾನ್ಯ, ಕೃಷಿ ಉಪಕರಣಗಳು ಸುಟ್ಟು ಕರಕಲಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು ಲಕ್ಷಗಟ್ಟಲೇ ರೂಪಾಯಿ ಹಾನಿ ಸಂಭವಿಸಿದೆ.
ಘಟನೆ ವಿವರ: ಪಟ್ಟಣದ ರೈತ ಶಿವಾನಂದ ಗುರಪ್ಪ ವಾಲಿ ಸೇರಿದಂತೆ ಸುತ್ತಮುತ್ತಲ ರೈತರು ಹಾನಿ ಅನುಭವಿಸಿದ್ದಾರೆ. ಸುಮಾರು 13 ಎಕರೆ ಕಟಾವ್ ಕಬ್ಬು ಸುಟ್ಟು ಕರಕಲಾಗಿದೆ. ಇದರೊಟ್ಟಿಗೆ ಪಕ್ಕದಲ್ಲೇ ಸಂಗ್ರಹಿಸಿದ್ದ 6 ಟ್ರ್ಯಾಕ್ಟರ್ ಗೊಬ್ಬರ, 2 ಟ್ರ್ಯಾಕ್ಟರ್ (ಒಣ ಮೇವು) ಕಣಿಕೆ, 15 ಚೀಲ ಜೋಳ, ಜೋಳದ ತೆನೆಗಳು, 15 ಚೀಲ ಸಜ್ಜೆ, 25 ಪೈಪುಗಳು, ಕಟ್ಟಿಗೆಯ ಕೃಷಿ ಸಲಕರಣೆಗಳು ಸಮೇತ ಸುಟ್ಟು ಕರಕಲಾಗಿವೆ.
ಬರಗಾಲದಿಂದ ತತ್ತರಿಸಿದ್ದ ರೈತ ಶಿವಾನಂದ ವಾಲಿ ಜಮೀನಲ್ಲಿ ಬಂದಷ್ಟು ಬರಲಿ ಎನ್ನುವ ಉದ್ದೇಶದಿಂದ ಈಚೆಗಷ್ಟೇ ರಾಸಿ ಮಾಡಿ ಮಾರಾಟ ಮಾಡಲು ಒಂದೆಡೆ ಸಂಗ್ರಹಿಸಿದ್ದರು. ಮತ್ತೊಂದೆದೆ ಕಟಾವಿಗೆ ಬಂದಿದ್ದ ಕಬ್ಬು ಸಹ ಲಕ್ಷಗಟ್ಟಲೇ ಹಾನಿಯಾಗಿದೆ. ಸಾಲ ಸೋಲ ಮಾಡಿ ಕಂಗೆಟ್ಟಿದ್ದ ಇವರಿಗೆ ಸದ್ಯ ವಿದ್ಯುತ್ ಅಗ್ನಿ ಅವಘಡ ಬಾರಿ ಪೆಟ್ಟು ನೀಡಿದ್ದು ಲಕ್ಷಗಟ್ಟಲೇ ಹಾನಿ ಅನುಭವಿಸಿ ಕಂಗಾಲಾಗಿ ಕಣ್ಣೀರು ಸುರಿಸಿದ ಘಟನೆಯೂ ನಡೆಯಿತು.
ಮುದ್ದೇಬಿಹಾಳದ ಅಗ್ನಿ ಶಾಮಕದ ಅಧಿಕಾರಿ ರಮೇಶ ಚಲ್ಲನವರ್, ಯಮನಪ್ಪ ಪೋಲೇಶಿ, ಚಂದ್ರಶೇಖರ್ ಮಾದರ, ಜಾವೀದ್, ಸಂತೋಷ, ತುಕಾರಾಮ್ ವಿರುಪಾಕ್ಷ ಹಾಗೂ ಸುನಿಲ್ ಅವರ ತಂಡ ಆಗಮಿಸಿ ಅಗ್ನಿ ನಂದಿಸಿತು. ಸಂಗಪ್ಪ ಹಂಪನಗೌಡ್ರ, ಮಲ್ಲೇಶಪ್ಪ ಗಂಗನಗೌಡ್ರ, ವೀರೇಶ ಗಂಗನಗೌಡ್ರ, ಸಂತೋಷ ವಾಲಿ ಮಹಾಂತೇಶ ಮೆದಿಕನಾಳ, ಶೇಖಪ್ಪ ಕಸಭೇಗೌಡ್ರ, ಸಂಗು ವಾಲಿ ಗಂಗಪ್ಪ ಗಚ್ಚಿನಮನಿ, ಪ್ರಭು ಮಳ್ಳೇತ್ತಿ ಇದ್ದರು.
ಅಗ್ನಿ ಅವಘಡಕ್ಕೆ ಸುಟ್ಟು ಕರಕಲಾದ ಸಂಗ್ರಹಿಸಿಟ್ಟ ದವಸ ದಾನ್ಯಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.