ಆಲಮಟ್ಟಿ: ಆಲಮಟ್ಟಿ ಜಲಾಶಯದಿಂದ ಮಂಗಳವಾರ ರಾತ್ರಿಯಿಂದ 3.5 ಲಕ್ಷ ಕ್ಯುಸೆಕ್ ನೀರು ಬಿಟ್ಟ ಕಾರಣ ಜಲಾಶಯದ ಮುಂಭಾಗದ ಕೃಷ್ಣಾ ತೀರದಲ್ಲಿ 100 ಕ್ಕೂ ಹೆಚ್ಚು ಎಕರೆ ಪ್ರದೇಶ ಜಲಾವೃತಗೊಂಡಿದೆ.
ಆಲಮಟ್ಟಿ ಜಲಾಶಯದ ಹಿಂಭಾಗದ ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಯ ನೀರು ರಭಸವಾಗಿ ಹರಿದುಬರುತ್ತಿಲ್ಲ. ಅದರ ಜತೆಗೆ ಚಿಕ್ಕಪಡಸಲಗಿ ಜಲಾಶಯದ ಹಿನ್ನೀರಿನಲ್ಲಿಯೂ ನದಿಯ ನೀರಿನ ಸಮಸ್ಯೆ ಉಂಟಾಗಿದ್ದು, ಇದರ ಪರಿಣಾಮವಾಗಿ ಹಿಪ್ಪರಗಿ ಜಲಾಶಯದ ಹಿನ್ನೀರು ಹಾಗೂ ಚಿಕ್ಕಪಡಸಲಗಿ ಹಿನ್ನೀರಿನಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಮುಂಜಾಗ್ರತೆಯ ಕ್ರಮವಾಗಿ ಆಲಮಟ್ಟಿ ಜಲಾಶಯದ ಹೊರಹರಿವು ಮಂಗಳವಾರ ರಾತ್ರಿ 8 ಗಂಟೆಯಿಂದ 3,50,000 ಕ್ಯುಸೆಕ್ಗೆ ಹೆಚ್ಚಿಸಲಾಗಿದೆ.
ಆಲಮಟ್ಟಿ ಜಲಾಶಯದ ಮಟ್ಟ ಕುಸಿದಿದ್ದರಿಂದ ಭಾನುವಾರ 3.25 ಲಕ್ಷ ಕ್ಯುಸೆಕ್ ಇದ್ದ ಹೊರಹರಿವನ್ನು ಸೋಮವಾರ 3 ಲಕ್ಷ ಕ್ಯುಸೆಕ್ಗೆ ಇಳಿಸಲಾಗಿತ್ತು. ಆದರೆ ಮಂಗಳವಾರ ರಾತ್ರಿಯಿಂದ ಮತ್ತೆ 3.5 ಲಕ್ಷ ಕ್ಯುಸೆಕ್ಗೆ ಹೆಚ್ಚಿಸಲಾಗಿದೆ.
100 ಎಕರೆ ಜಲಾವೃತ: 3.5 ಲಕ್ಷ ಕ್ಯುಸೆಕ್ ನೀರು ಬಿಟ್ಟ ಕಾರಣ ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ತೀರ ಪ್ರದೇಶದ ಅರಳದಿನ್ನಿ, ಯಲ್ಲಮ್ಮನ ಬೂದಿಹಾಳ, ಕಾಶಿನಕುಂಟಿ, ಯಲಗೂರ, ಮಸೂತಿ ಗ್ರಾಮದ ಪ್ರಾಥಮಿಕ ಮಾಹಿತಿಯ ಪ್ರಕಾರ ಸುಮಾರು 100ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು, ತೊಗರಿ ಬೆಳೆ ಜಲಾವೃತಗೊಂಡಿದೆ ಎಂದು ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರಾವದಗಿ ತಿಳಿಸಿದರು.
3.41 ಲಕ್ಷ ಕ್ಯುಸೆಕ್ ಒಳಹರಿವು: ಮಹಾರಾಷ್ಟ್ರದ ಮಳೆ ಹಾಗೂ ಘಟಪ್ರಭಾ ನದಿಯ ರಭಸದ ಕಾರಣ ಕಾರಣ ಸೋಮವಾರದಿಂದ ಆಲಮಟ್ಟಿ ಜಲಾಶಯದ ಒಳಹರಿವು 3 ಲಕ್ಷ ಕ್ಯುಸೆಕ್ ಇದ್ದದ್ದು, ಬುಧವಾರ ಸಂಜೆ 3,41,944 ಕ್ಯುಸೆಕ್ಗೆ ತಲುಪಿದೆ. ಕರ್ನಾಟಕಕ್ಕೆ ಬಂದು ಸೇರುವ ಕಳ್ಳೋಳ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು ಬುಧವಾರ 2,90,867 ಕ್ಯುಸೆಕ್ ಇದೆ. ಘಟಪ್ರಭಾ ನದಿಯ ಹರಿವು ಕೊಂಚ ಕಡಿಮೆಯಾಗಿದ್ದು 46,810 ಕ್ಯುಸೆಕ್ ಹರಿವು ಇದೆ.
ಕುಸಿದ ಜಲಾಶಯ ಮಟ್ಟ: 519.6 ಮೀ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದ ಮಟ್ಟ ಮತ್ತಷ್ಟು ಕಡಿಮೆಯಾಗಿದ್ದು, ಬುಧವಾರ ಸಂಜೆ 515.45 ಮೀಗೆ ತಲುಪಿದೆ. 123 ಟಿಎಂಸಿ ಅಡಿ ಗರಿಷ್ಠ ಎತ್ತರದ ಜಲಾಶಯದಲ್ಲಿ 67.35 ಟಿಎಂಸಿ ಅಡಿ ನೀರು ಸಂಗ್ರಹ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.