ADVERTISEMENT

ಉಕ್ಕಿ ಹರಿದ ಡೋಣಿ: ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 2:46 IST
Last Updated 13 ಅಕ್ಟೋಬರ್ 2020, 2:46 IST
ದಾಶ್ಯಾಳ ಗ್ರಾಮದ ರೈತರ ಜಮೀನಿಗೆ ಡೋಣಿ ನದಿ ನೀರು ಹರಿದು ಉಳ್ಳಾಗಡ್ಡಿ ಹಾಳಾಗಿರುವುದು
ದಾಶ್ಯಾಳ ಗ್ರಾಮದ ರೈತರ ಜಮೀನಿಗೆ ಡೋಣಿ ನದಿ ನೀರು ಹರಿದು ಉಳ್ಳಾಗಡ್ಡಿ ಹಾಳಾಗಿರುವುದು   

ತಿಕೋಟಾ: ನಿರಂತರ ಮಳೆಯಿಂದ ಡೋಣಿ ನದಿ ಉಕ್ಕಿ ಹರಿದಿದ್ದು, ಈ ಭಾಗದ ರೈತರ ಜಮೀನುಗಳಿಗೆ ನದಿ ನೀರು ನುಗ್ಗಿ ಅಪಾರ ಪ್ರಮಾಣದ ಬೇಳೆ ನಾಶವಾಗಿದೆ.

ಬಬಲೇಶ್ವರ ತಾಲ್ಲೂಕಿನ ದಾಸ್ಯಾಳ, ದನ್ಯಾಳ, ಕಣಮುಚನಾಳ, ಕೊಟ್ಯಾಳ, ಸಾರವಾಡ, ತೊನಸ್ಯಾಳ ಗ್ರಾಮಗಳು ಡೋಣಿ ನದಿಯ ದಡದಲ್ಲಿವೆ. ಇಲ್ಲಿನ 250 ಹೆಕ್ಟೇರ್‌ ಜಮೀನಿನಲ್ಲಿ ಫಸಲಿಗೆ ಬಂದ ತೊಗರಿ, ಉಳ್ಳಾಗಡ್ಡಿ, ಹತ್ತಿ ಹಾಗೂ ಬಿತ್ತನೆ ಮಾಡಿದ ಕಡಲೆ ಹಾಳಾಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ ತೊಗರಿ ಹಾಗೂ ಉಳ್ಳಾಗಡ್ಡಿಯೂ ನದಿ ಪ್ರವಾಹದಿಂದ ನಾಶವಾಗಿ, ರೈತರಿಗೆ ಕಣ್ಣೀರು ತರಿಸಿದೆ.

ದಾಸ್ಯಾಳ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೊಣಕಾಲಿನವರೆಗೂ ನೀರು ಬಂದಿದೆ. ಇದರಿಂದ ಜನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

ADVERTISEMENT

ದಸ್ಯಾಳ ಗ್ರಾಮಕ್ಕೆ ಹೋಗಲು ಸೇರುವೆ ನಿರ್ಮಾಣವಾಗುತ್ತಿದ್ದು,ಯಂತ್ರೋಪಕರಣಗಳು, ವಾಹನಗಳು ದೋಣಿ ಪ್ರವಾಹದಲ್ಲಿ ಮುಳುಗಡೆಯಾಗಿವೆ. ಕಾರ್ಮಿಕರ ತಾತ್ಕಾಲಿಕ ಶೆಡ್‌ಗಳು ಸಹ ಜಲಾವೃತವಾಗಿವೆ.

ಬಬಲೇಶ್ವರ ಶಾಸಕ ಎಂ.ಬಿ‌.ಪಾಟೀಲ ಡೋಣಿ ನದಿ ಪ್ರವಾಹದ ಕುರಿತು ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಡೋಣಿ ನದಿ ಪಾತ್ರದ ಜನರಿಗೆ ಸೂಕ್ತ ಸೌಲಭ್ಯ ಒದಗಿಸಲು, ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.