ವಿಜಯಪುರ: ‘ರಾಜ್ಯದಲ್ಲಿ ಮಳೆ, ಪ್ರವಾಹಕ್ಕೆ ತುತ್ತಾಗಿರುವ ರೈತರಿಗೆ ಸೂಕ್ತ ಪರಿಹಾರ, ನೆರವು ಕಲ್ಪಿಸಲು ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗ ಒಯ್ಯಲು ಸರ್ಕಾರ ಶೀಘ್ರ ಮುಂದಾಗಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಭೀಮಾ ನದಿ ಪ್ರವಾಹ ಬಾಧಿತ ಜಿಲ್ಲೆಯ ಇಂಡಿ, ಆಲಮೇಲ ತಾಲ್ಲೂಕಿನ ರೈತರ ಹೊಲಗಳಿಗೆ ಶನಿವಾರ ಭೇಟಿ ನೀಡಿ ಹಾನಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ಆಗಿರುವ ಹಾನಿಯನ್ನು ಈವರೆಗೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಗಮನಕ್ಕೆ ತಂದಿಲ್ಲ. ಕೇವಲ ಕೇಂದ್ರದ ಮೇಲೆ ಗೂಬೆ ಕೂರಿಸುವ ಯತ್ನವನ್ನು ಮುಖ್ಯಮಂತ್ರಿ, ಸಚಿವರು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಪ್ರವಾಹ ವೀಕ್ಷಣೆ ವರದಿಯನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ನೀಡಲಾಗುವುದು. ನೆರೆ ಹಾನಿ ಸಂಬಂಧ ಚರ್ಚಿಸಲು ಶೀಘ್ರ ಸರ್ವಪಕ್ಷ ಸಭೆ ಕರೆಯಬೇಕು’ ಎಂದು ಆಗ್ರಹಿಸಿದರು.
‘ಪ್ರವಾಹದಿಂದ ಹಾನಿಯಾದ ಸ್ಥಳಕ್ಕೆ ಯಾವ ಸಚಿವರೂ ಭೇಟಿ ನೀಡಿಲ್ಲ. ಬಿಜೆಪಿ ಎರಡು ತಂಡಗಳಲ್ಲಿ ಪ್ರವಾಸ ಮಾಡುವ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಕಾಟಾಚಾರಕ್ಕೆ ಎಂಬಂತೆ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ’ ಎಂದು ದೂರಿದರು.
ಸಿ.ಎಂ.ಗೆ ಶನಿಕಾಟ: ‘ಮುಖ್ಯಮಂತ್ರಿ ಅವರಿಗೆ ಶನಿಕಾಟ ಎದುರಾಗಿದೆ. ಒಂದು ಕಡೆ ಡಿಕೆಶಿ ಕಾಟ, ಇನ್ನೊಂದೆಡೆ ಪರಮೇಶ್ವರ್ ಕಾಟ, ಮತ್ತೊಂದೆಡೆ ಎಂ.ಬಿ. ಪಾಟೀಲ ಕಾಟ. ಹೀಗಾಗಿ ಮುಖ್ಯಮಂತ್ರಿ ರೈತರಿಗೆ ಕಾಟ ನೀಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.