ADVERTISEMENT

ತಾಳಿಕೋಟೆ- ದೇವರಹಿಪ್ಪರಗಿ ರಸ್ತೆಯಲ್ಲಿ ಅಪಘಾತ; ಬಾಲಕಿ ಸಾವು, 20 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 12:39 IST
Last Updated 4 ಡಿಸೆಂಬರ್ 2023, 12:39 IST
<div class="paragraphs"><p>ಅಪಘಾತ </p></div>

ಅಪಘಾತ

   

-ಸಾಂದರ್ಭಿಕ ಚಿತ್ರ

ವಿಜಯಪುರ: ಕೃಷಿ ಕೆಲಸಕ್ಕೆ ಕೂಲಿಯಾಳುಗಳನ್ನು ಬುಲೇರೊ ಗೂಡ್ಸ್‌ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಉರುಳಿ ಬಿದ್ದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನಪ್ಪಿದ್ದು, 10 ಬಾಲಕಾರ್ಮಿಕರು ಸೇರಿದಂತೆ 20 ಜನ ಕೂಲಿಕಾರ್ಮಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಜಿಲ್ಲೆಯ ತಾಳಿಕೋಟೆ- ದೇವರಹಿಪ್ಪರಗಿ ರಸ್ತೆಯಲ್ಲಿ ನಡೆದಿದೆ.

ADVERTISEMENT

ಕಲ್ಪನಾ ಭಜಂತ್ರಿ (16) ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನುಳಿದಂತೆ ರೇಣುಕಾ ಇಣಚಗಲ್ಲ (36), ಲಕ್ಷ್ಮೀ ನಾಗಾವಿ (16), ಬಸವ್ವ ಕೆಸರಟ್ಟಿ (50), ದ್ಯಾಮವ್ವ ಕೆಸರಟ್ಟಿ (50),  ಬಾಗೇಶ  ಭಜಂತ್ರಿ (17), ಶ್ರೀದೇವಿ ಇಣಚಗಲ್ಲ (16), ಮುತ್ತು ಪಾಟೀಲ (14), ಶರಣಮ್ಮ ಇಣಚಗಲ್ಲ (17), ಪವಿತ್ರಾ  ಇಣಚಗಲ್ಲ (17), ಲಕ್ಷ್ಮೀ  ಪಾಟೀಲ (38), ಲಕ್ಷ್ಮೀಬಾಯಿ ಇಣಚಗಲ್ಲ (28), ಪರಸು ಪಾಟೀಲ (18), ಭೀಮಬಾಯಿ ಕರೆಕಲ್ಲ (30), ರೇಣುಕಾ ಕರೆಕಲ್ಲ (16), ಮಹಾದೇವಿ ಚಿತ್ತಾಪೂರ (35), ಸಿದ್ದವ್ವ  ಭಜಂತ್ರಿ (34), ಶೋಭಾ ಬರೆದೆನಾಳ (35), ಮಲ್ಲಮ್ಮ ನಾಗಾವಿ (35),  ಭಾಗ್ಯಶ್ರೀ ನಾಗವಿ (16), ಅಯ್ಯಾಮ್ಮ ಹೊಸಕೇರಿ (55) ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಕೂಲಿಯಾಳುಗಳೆಲ್ಲರೂ ತಾಳಿಕೋಟೆ ತಾಲ್ಲೂಕಿನ ಬಿಳೆಬಾವಿ ಗ್ರಾಮದವರಾಗಿದ್ದು, ಹತ್ತಿ ಬಿಡಿಸಲು ಹೊಲಕ್ಕೆ ತೆರಳುತ್ತಿದ್ದಾಗ ಚಾಲಕ ಏಕಾಏಕಿ ಬುಲೇರೊ ಗೂಡ್ಸ್‌ನ ಬ್ರೇಕ್‌ ಹಾಕಿದ ಪರಿಣಾಮ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಲೆಗೆ ಹೋಗುವ ಮಕ್ಕಳನ್ನು ಬಡತನದ ಕಾರಣಕ್ಕೆ ಬಿಡಿಸಿ, ಕೂಲಿ ಕೆಲಸಕ್ಕೆ ಕಳುಹಿಸಿದ್ದೆವು ಎಂದು ಪೋಷಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.