ADVERTISEMENT

ಪ್ರೌಢಶಾಲೆ ಅರಂಭಿಸಲು ಇಲಾಖೆ ಚಿಂತನೆ

ಯಾಳವಾರ ಶಾಲೆಗೆ ಅಧಿಕಾರಿಗಳ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 10:02 IST
Last Updated 28 ಫೆಬ್ರುವರಿ 2020, 10:02 IST
ಯಡ್ರಾಮಿ ತಾಲ್ಲೂಕಿನ ಯಾಳವಾರ ಶಾಲೆಗೆ ಬಿಇಒ ಶಾಂತಪ್ಪ ಹುಲ್ಕಲ್, ಬಿಆರ್‍ಸಿಸಿ ಡಾ.ನಿಂಗರಾಜ್ ಮೂಲಿಮನಿ, ಸಿಆರ್‍ಪಿ ಮಂಜುನಾಥ ಅವರನ್ನು ಒಳಗೊಂಡ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು
ಯಡ್ರಾಮಿ ತಾಲ್ಲೂಕಿನ ಯಾಳವಾರ ಶಾಲೆಗೆ ಬಿಇಒ ಶಾಂತಪ್ಪ ಹುಲ್ಕಲ್, ಬಿಆರ್‍ಸಿಸಿ ಡಾ.ನಿಂಗರಾಜ್ ಮೂಲಿಮನಿ, ಸಿಆರ್‍ಪಿ ಮಂಜುನಾಥ ಅವರನ್ನು ಒಳಗೊಂಡ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು   

ಯಡ್ರಾಮಿ: ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಪ್ರೌಢ ಶಾಲೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಯಾಳವಾರ ಶಾಲೆಗೆ ಬಿ.ಇ.ಒ ಶಾಂತಪ್ಪ ಹುಲ್ಕಲ್, ಬಿ.ಆರ್‌.ಸಿ ಡಾ.ನಿಂಗರಾಜ್ ಮೂಲಿಮನಿ, ಸಿ.ಆರ್‌.ಪಿ ಮಂಜುನಾಥ ಅವರನ್ನು ಒಳಗೊಂಡ ಅಧಿಕಾರಿಗಳ ತಂಡ ಈಚೆಗೆ ಭೇಟಿ ನೀಡಿ ಪರಿಶೀಲಿಸಿದೆ.

ಗ್ರಾಮದಲ್ಲಿ ಪ್ರೌಢಶಾಲೆ ಇಲ್ಲದೆ ಹೆಣ್ಣು ಮಕ್ಕಳ ಶಿಕ್ಷಣ ಮೊಟಕಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ ಫೆ.20ರಂದು ವರದಿ ಪ್ರಕಟಿಸಿತ್ತು.

ಗ್ರಾಮದಲ್ಲಿ ಈಗ ಎಂಟನೇ ತರಗತಿವರೆಗೆ ಶಾಲೆ ಇದೆ. ಒಟ್ಟು 374 ಮಕ್ಕಳ ದಾಖಲಾತಿ ಇದೆ. 9ನೇ ಮತ್ತು 10ನೇ ತರಗತಿಗೆ ಇಜೇರಿ ಅಥವಾ ಚಿಗರಹಳ್ಳಿ ಕ್ಯಾಂಪ್, ಜೇವರ್ಗಿ ಹೋಗಬೇಕಾಗಿದೆ.

ADVERTISEMENT

ಹತ್ತಿರದ 5 ಕಿ.ಮೀ ಒಳಗೆ ಪ್ರೌಢ ಶಾಲೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಆದರೆ ಹೊಸ ಪ್ರೌಢ ಶಾಲೆ ಮಂಜೂರು ಮಾಡಬೇಕಾದರೆ 7ನೇ ಮತ್ತು 8ನೇ ತರಗತಿಯಲ್ಲಿ 70 ವಿದ್ಯಾರ್ಥಿಗಳು ಇರಬೇಕು ಎಂಬ ನಿಯಮ ಇದೆ ಎಂದು ಶಾಂತಪ್ಪ ಹುಲ್ಕಲ್ ತಿಳಿಸಿದರು.

ಪ್ರಸ್ತುತ ಎಂಟನೇ ತರಗತಿಯಲ್ಲಿ 50 ವಿದ್ಯಾರ್ಥಿಗಳ ಇದ್ದಾರೆ. ಈ ಶೈಕ್ಷಣಿಕ ವರ್ಷದ ಅವಧಿ ಮುಗಿಯುತ್ತ ಬಂದಿರುವುದರಿಂದ ಮುಂದಿನ ಸಾಲಿಗೆ 8ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು 70 ಕ್ಕೆ ಹೆಚ್ಚಿಸುವಂತೆ ಮುಖ್ಯ ಗುರುಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಪ್ರೌಢ ಶಾಲೆಯನ್ನು ಮಂಜೂರು ಮಾಡಲು ಮಕ್ಕಳ ದಾಖಲಾತಿಯ ಹೆಚ್ಚುವರಿ ಅಂಕಿ-ಸಂಖ್ಯೆಯಪ್ರಕಾರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಅವರು ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.