ಮಾನವ, ಮಹಾ ಮಾನವ ಎರಡು ಪದಗಳು ಸಾಮಾನ್ಯವಾಗಿ ಕಂಡರೂ ಅವುಗಳ ಅರ್ಥ ವಿಭಿನ್ನವಾಗಿದೆ. ಇದನ್ನು ಸರಳಿಕರಿಸಿ ಹೇಳುವದಾದರೆ, ಸಂಸಾರದಲ್ಲಿದ್ದು ಸಂಕಷ್ಟ ಪಡುವವರು ಮಾನವರು. ಸಂಸಾರದಲ್ಲಿದ್ದು ಸದ್ಗತಿಯನ್ನ ಹೊಂದಿದವರು ಮಹಾಮಾನವರು.
‘ಹಾವಿನ ಹೆಡೆಯ ಕೆಳಗೆ ಕುಳಿತ ಕಪ್ಪೆ ಮುಂದೇ ಹಾರುವ ನೊಣಕ್ಕೆ ನಾಲಿಗೆ ಚಾಚಿತ್ತು...’ ಇದು ಮಾನವನ ವಾಸ್ತವ ಇರುವಿಕೆಯನ್ನು ಸೂಚಿಸಿದರೆ, ಪರಧನ, ಪರಸ್ತ್ರೀ, ಪರ ದೈವಂಗಳಿಗೆರಗದಿಪ್ಪುದೆ ನಿಯಮ ಎಂಬುದು ಶರಣರ ನಿಲುವಾಗಿತ್ತು. ಆದ್ದರಿಂದ ಕಲ್ಯಾಣದ ಶರಣರು ಈ ಮಾನವ ಸಂಕುಲದಲ್ಲಿ ಇದ್ದು, ಮಹಾ ಮಾನವರಾದರು.
12ನೇ ಶತಮಾನದಲ್ಲಿ ಕಾಶ್ಮೀರದ ಅರಸು ಮನೆತನದ ನಿಜದೇವಿ ಬಾಲ್ಯದಿಂದಲೂ ಆಧ್ಯಾತ್ಮದ ಸಂಸ್ಕಾರವುಳ್ಳವಳಾಗಿದ್ದಳು. ಆಧ್ಯಾತ್ಮ, ಒಳ್ಳೆಯವರ ಒಡನಾಟದಿಂದ ಆಕೆ ಪಾರಮಾರ್ಥದ ಅರ್ಥವನ್ನು ಅರಿತಿದ್ದಳು. ನಿರ್ಮೊಹದ ತುತ್ತತುದಿಯನ್ನು ತಲುಪಿ, ನಿರ್ವಾಣಾವಸ್ತೆಯಲ್ಲಿದ್ದಳು (ದಿಗಂಬರೆ). ಕಲ್ಯಾಣದ ಕಡೆಗೆ ನಡೆದ ಆಕೆಯ ಪೂಜಾ ನಿಷ್ಠೆಯನ್ನು ಮೆಚ್ಚದ ಶಿವ ಆಕೆಯನ್ನು ಪರೀಕ್ಷಿಸಲು ಸುಂದರ ಯುವಕನ ರೂಪದಲ್ಲಿ ಬಂದು, ನನ್ನನ್ನು ಮದುವೆಯಾಗು ಎಂದು ಬೆನ್ನುಹತ್ತಿದ. ಆದರೆ, ಆಕೆ ತನ್ನಲ್ಲಿರುವ ಆಧ್ಯಾತ್ಮದ ಶಕ್ತಿ, ನಿಜ ವೈರಾಗ್ಯದಿಂದ ದೃಢತೆ ಉಳ್ಳವಳಾಗಿದ್ದಳು. ಹಾಗಾಗಿ, ಶಿವನಿಗೆ ಹೇಳುತ್ತಾಳೆ ನೀನಗೀಗಾಗಲೆ ಗಂಗೆ, ಗೌರಿ ಎಂಬ ಇಬ್ಬರು ಹೆಂಡಿರಿದ್ದಾರೆ ಮತ್ತೆ ನನ್ನೆಕೆ ಆಸೆ ಪಡುತ್ತಿರುವೇ?ಇದನ್ನು ನಮ್ಮ ಕಲ್ಯಾಣದ ಶರಣರು ನೋಡಿದರೆ ಗಹಗಹಿಸಿ ನಗುತ್ತಾರೆ ಎಂದು ಉತ್ತರಿಸಿದಾಗ ಶಿವ ಆಕೆಯ ನಿಸ್ವಾರ್ಥ ನಿಲುವಿಗೆ ಸೋತು, ನಿರ್ವಾಣಾವಸ್ತೆಯಲ್ಲಿ ಕಲ್ಯಾಣಕ್ಕೆ ಹೊರಟ ಆಕೆಯನ್ನು ನೋಡಿ ಶರಣರು ಅನ್ಯತಾ ಭಾವಿಸದಿರಲೆಂದು ಬೊಂತೆಯನ್ನು (ಕೌದಿ) ನೀಡುತ್ತಾನೆ. ಆಗ ಆಕೆ ಕಲ್ಯಾಣವನ್ನು ಸೇರಿ ಬೊಂತಾದೇವಿಯಾಗಿ ‘ಮಹಾ ಮಾನವರ’ ಸಾಲಿಗೆ ಸೇರುತ್ತಾಳೆ.
ಸಂಗ್ರಹ: ಎಂ.ಬಿ.ಕಟ್ಟಿಮನಿ
(ವಿಜಯಪುರದ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಶ್ರಾವಣಮಾಸದ ಪ್ರವಚನಸಾರ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.