ADVERTISEMENT

ವಿಜಯಪುರ: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಜ್ಜು, ಭದ್ರತೆಗಾಗಿ ಪೊಲೀಸರ ನಿಯೋಜನೆ

ಬಂದೋಬಸ್ತ್‌ ಕರ್ತವ್ಯಕ್ಕೆ 987 ಪೊಲೀಸ್ ಅಧಿಕಾರಿ

ಬಸವರಾಜ ಸಂಪಳ್ಳಿ
Published 31 ಡಿಸೆಂಬರ್ 2025, 4:55 IST
Last Updated 31 ಡಿಸೆಂಬರ್ 2025, 4:55 IST
<div class="paragraphs"><p>ವಿಜಯಪುರ ನಗರದ ಬಸವೇಶ್ವರ ಚೌಕಿ ಬಳಿ ಇರುವ ‘ಕೇಕ್‌ ವಾಲಾ’ದಲ್ಲಿ ಹೊಸ ವರ್ಷಕ್ಕೆ ಮಾರಾಟ ಮಾಡಲು ತಯಾರಾಗಿರುವ ಬಗೆಬಗೆಯ ಕೇಕ್‌ಗಳು –ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ</p></div>

ವಿಜಯಪುರ ನಗರದ ಬಸವೇಶ್ವರ ಚೌಕಿ ಬಳಿ ಇರುವ ‘ಕೇಕ್‌ ವಾಲಾ’ದಲ್ಲಿ ಹೊಸ ವರ್ಷಕ್ಕೆ ಮಾರಾಟ ಮಾಡಲು ತಯಾರಾಗಿರುವ ಬಗೆಬಗೆಯ ಕೇಕ್‌ಗಳು –ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ

   

ವಿಜಯಪುರ: ಇತಿಹಾಸದ ಪುಟ ಸೇರಲಿರುವ 2025ನೇ ಇಸವಿಗೆ ವಿದಾಯ ಹೇಳಿ, 2026ನೇ ಇಸವಿಯನ್ನು ಅದ್ದೂರಿಯಾಗಿ ಸ್ವಾಗತಿಸಲು ‘ಬಸವನಾಡು’ ಸಜ್ಜಾಗಿದೆ.

ಹೊಸ ವರ್ಷಾಚರಣೆಗೆ ವಿಜಯಪುರ ನಗರ, ಸಿಂದಗಿ, ಇಂಡಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ, ಆಲಮೇಲ, ಚಡಚಣ, ತಾಳಿಕೋಟೆ, ತಿಕೋಟ ಸೇರಿದಂತೆ ತಾಲ್ಲೂಕು ಕೇಂದ್ರಗಳು, ಇತರೆ ಸಣ್ಣಪುಟ್ಟ ಪಟ್ಟಣಗಳಲ್ಲೂ ಭರ್ಜರಿ ಸಿದ್ಧತೆ ನಡೆದಿದೆ.

ADVERTISEMENT

ಜಿಲ್ಲೆಯ ಪ್ರಮುಖ ಹೋಟೆಲ್‌, ರೆಸ್ಟೋರೆಂಟ್‌ಗಳು ಕಣ್ಣು ಕೋರೈಸುವ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದು, ಹೊಸ ವರ್ಷ ಆಚರಣೆಗೆ ಯುವ ಜನರನ್ನು ಕೈಬೀಸಿ ಕರೆಯುತ್ತಿವೆ. ಸಂಗೀತ, ನೃತ್ಯ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ, ಸ್ನೇಹಿತರೊಡಗೂಡಿ ತಮ್ಮ ಮನೆಗಳಲ್ಲಿ, ಹೊಲಗಳಲ್ಲಿ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಶಾಲಾ, ಕಾಲೇಜುಗಳಲ್ಲೂ ವಿದ್ಯಾರ್ಥಿ, ಶಿಕ್ಷಕರು ಹೊಸ ವರ್ಷಾಚರಣೆಗೆ ಅಣಿಯಾಗಿದ್ದಾರೆ.

ಬೇಕರಿಗಳಲ್ಲಿ ಬಗೆಬಗೆಯ ಕೇಕ್‌ಗಳು, ಸಿಹಿ ತಿನಿಸುಗಳು ತಯಾರಾಗಿವೆ. ಕೋಳಿ, ಕುರಿ, ಮೀನು ಖಾದ್ಯಗಳಿಗೆ ಈಗಾಗಲೇ ಬೇಡಿಕೆ ಹೆಚ್ಚಿದ್ದು, ಮುಂಗಡವಾಗಿ ಕಾಯ್ದಿರಿಸಲಾಗಿದೆ. ಬುಧವಾರ ರಾತ್ರಿ ಹೊಸ ವರ್ಷ ಸ್ವಾಗತಿಸಲು ವೈವಿಧ್ಯಮಯ ಪಟಾಕಿಗಳನ್ನು ಸಿಡಿಸಲು ಖರೀದಿಸುತ್ತಿದ್ದಾರೆ.

ಜಿಲ್ಲೆಯಿಂದ ಹಲವರು ಗೋವಾ, ಮಂಗಳೂರು, ಕಾರವಾರ, ಮುಂಬೈ, ಬೆಂಗಳೂರು, ಮೈಸೂರು, ಹೈದರಾಬಾದ್‌, ಸೋಲಾಪುರದತ್ತ ಸ್ನೇಹಿತರೊಡಗೂಡಿ ಪ್ರವಾಸಕ್ಕೆ ತೆರಳಿದ್ದಾರೆ.

ಪ್ರಮುಖ ದೇವಾಲಯಗಳಲ್ಲೂ ವಿಶೇಷ ಪೂಜೆಗೆ ಏರ್ಪಾಡು ಮಾಡಲಾಗಿದೆ. ದೇವರಿಗೆ ವಿಶೇಷ ಅಲಂಕಾರ ಮಾಡಲು ಪೂಜಾರಿಗಳು ತಯಾರಿ ನಡೆಸಿದ್ದಾರೆ.

ಸೂಕ್ತ ಮುಂಜಾಗ್ರತೆ:

ವಿಜಯಪುರ ನಗರ, ತಾಲ್ಲೂಕು ಕೇಂದ್ರ ಹಾಗೂ ಇತರೆ ಪಟ್ಟಣಗಳಲ್ಲಿ 2026ರ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೂಚನೆ ನೀಡಿದ್ದಾರೆ.

ಜಿಲ್ಲೆಯ ಎಲ್ಲ ಹೋಟೆಲ್, ಲಾಡ್ಜ್, ರೆಸ್ಟೋರೆಂಟ್ ಹಾಗೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸಂಬಂಧಪಟ್ಟ ಮಾಲೀಕರು, ಮ್ಯಾನೇಜರ್‌ಗಳ ಸಭೆ ಕೈಕೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಎಲ್ಲ ಅಗತ್ಯ ಮುಂಜಾಗ್ರತೆ ಕ್ರಮ ವಹಿಸುವ ಕುರಿತು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲು, ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಸುಸ್ಥಿತಿಯಲ್ಲಿರುವ ಬಗ್ಗೆ ಕ್ರಮ ಕೈಕೊಳ್ಳುವಂತೆ ಸೂಕ್ತ ತಿಳಿವಳಿಕೆ ನೀಡಲಾಗಿದೆ ಎಂದು ಹೇಳಿದರು.

987 ಪೊಲೀಸ್ ನಿಯೋಜನೆ:

ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ 165 ಕಡೆಗಳಲ್ಲಿ ಬ್ಯಾರಿಕೇಡ್‌ ವ್ಯವಸ್ಥೆ, 39 ಕಡೆಗಳಲ್ಲಿ ಚೆಕ್ ಪಾಯಿಂಟ್‌ ವ್ಯವಸ್ಥೆ, ಪ್ರಮುಖ 16 ಸಾರ್ವಜನಿಕ ಸ್ಥಳಗಳನ್ನು ಎಎಸ್‌ಸಿ  (Anti Sabotage Check) ತಂಡದವರಿಂದ ಪರಿಶೀಲಿಸಲಾಗಿದೆ ಹಾಗೂ ಹೆಚ್ಚುವರಿ ಎಸ್‌ಪಿ 1, ಡಿಎಸ್‌ಪಿ 6, ಪಿಐ/ಸಿಪಿಐ 13, ಪಿಎಸ್ಐ 46, ಎಎಸ್ಐ 75, ಸಿಎಚ್‌ಸಿ/ಸಿಪಿಸಿ 643, ಗೃಹ ರಕ್ಷಕ ಸಿಬ್ಬಂದಿ 200 ಸೇರಿದಂತೆ ಒಟ್ಟು 987 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಬಂದೋಬಸ್ತ್‌ ಕರ್ತವ್ಯಕ್ಕೆ ನೇಮಿಸಲಾಗಿದೆ. ಜೊತೆಗೆ 10 ಡಿಎಆರ್,  1 ಐಆರ್‌ಬಿ ತುಕಡಿಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಕ್ಷ್ಮಣ ನಿಂಬರಗಿ
ಹೊಸ ವರ್ಷವನ್ನು ಎಲ್ಲ ನಾಗರಿಕರು ಜವಾಬ್ದಾರಿಯುತವಾಗಿ ಸುರಕ್ಷಿತವಾಗಿ ಮತ್ತು ಸಂತೋಷದಿಂದ ಆಚರಿಸಬೇಕು. ಸಾರ್ವಜನಿಕರ ಸಹಕಾರವೇ ಶಾಂತಿಪೂರ್ಣ ಆಚರಣೆಗೆ ಮುಖ್ಯವಾಗಿದೆ 
ಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಜಯಪುರ

ಸಾರ್ವಜನಿಕರಿಗೆ ಪೊಲೀಸ್‌ ಸೂಚನೆಗಳು  ಹೊಸ ವರ್ಷದ ಸಂಭ್ರಮಾಚರಣೆಯನ್ನು ಎಲ್ಲರೂ ಶಾಂತಿ ಸೌಹಾರ್ದತೆ ಹಾಗೂ ಸುರಕ್ಷಿತವಾಗಿ ಆಚರಿಸಬೇಕು ಎಂದು ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಕೋರಲಾಗಿದೆ. ಸಾರ್ವಜನಿಕ ಶಾಂತಿ ಕಾಪಾಡಿ: ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಬಾರದು. ಗಲಾಟೆ ಅಶಾಂತಿ ಹಲ್ಲೆ ಅಥವಾ ಅಸಭ್ಯ ವರ್ತನೆ ಕಾನೂನು ಬಾಹಿರವಾಗಿದೆ.  ಮದ್ಯಪಾನ ಮಾಡಿ ವಾಹನ ಚಾಲನೆ ನಿಷೇಧ: ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಶಬ್ದ ಮಾಲಿನ್ಯ ನಿಯಂತ್ರಣ: ನಿಗದಿತ ಸಮಯ ಮೀರಿಸಿ ಜೋರಾಗಿ ಸಂಗೀತ ಡಿಜೆ ಪಟಾಕಿ ಸಿಡಿಸುವುದು ನಿಷೇಧ. ದ್ವೀ-ಚಕ್ರ ವಾಹನಗಳ ಸೈಲೆನ್ಸ್‌ ತೆಗೆದು ಮೋಟಾರ್ ಸೈಕಲ್ ಚಾಲನೆ ಮಾಡುವುದು ಶಬ್ದ ಮಾಲಿನ್ಯವಾಗಿದ್ದು ಅಂತಹವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಲಾಗುವುದು. ಕಾರಣ ಸಾರ್ವಜನಿಕರು ಶಬ್ದ ಮಾಲಿನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ಪೊಲೀಸ್ ತಪಾಸಣೆಗೆ ಸಹಕರಿಸಿ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ತಪಾಸಣೆ ಹೆಚ್ಚಿಸಲಾಗಿದ್ದು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ: ಮಹಿಳೆಯರ ಮತ್ತು ಮಕ್ಕಳ ಮೇಲೆ ದುರ್ವರ್ತನೆ ಕಿರುಕುಳ ಚುಡಾಯಿಸುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.   ನಿಗದಿತ ಸಮಯ ಪಾಲನೆ: ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ಸಮಯ ಮೀರಿಸಿ ಗುಂಪುಗೂಡುವುದು ವಾಹನಗಳನ್ನು ವೇಗವಾಗಿ ಚಲಾಯಿಸುವುದು ರಸ್ತೆ ತಡೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತುರ್ತು ಪರಿಸ್ಥಿತಿ ಸಹಾಯವಾಣಿ: ಯಾವುದೇ ತುರ್ತು ಪರಿಸ್ಥಿತಿ ಅಥವಾ ಅಹಿತಕರ ಘಟನೆ ಕಂಡುಬಂದಲ್ಲಿ ತಕ್ಷಣ 112 ಗೆ ಕರೆ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.