ವಿಜಯಪುರ: ಗುರು ಜೀವನದಲ್ಲಿ ಬೆಳಕು ನೀಡುತ್ತಾನೆ. ಬೆಳಕು ಜ್ಞಾನದ ಸಂಕೇತ. ನಮ್ಮನ್ನು ಕತ್ತಲೆಯಿಂದ ಜ್ಞಾನದ ಕಡೆಗೆ ಯಾರು ಕರೆದೊಯ್ಯುತ್ತಾರೋ ಅವರೇ ಗುರುಗಳು ಎಂದು ಕಾಖಂಡಕಿಯ ಗುರುದೇವಾಶ್ರಮದ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮದು ಮಾತೃ ದೇವೋಭವ, ಪಿತೃ ದೇವೋಭವ, ಗುರು ದೇವೋಭವ ಎಂದು ಆರಾಧಿಸುವ ಘನತೆವೆತ್ತ ನಾಡು. ನಮ್ಮ ಬಾಳಿನಲ್ಲಿ ಈ ಮೂವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ನಾವು ಜೀವನ ಪೂರ್ತಿ ಅವರಿಗೆ ಋಣಿಯಾಗಿರಬೇಕು ಎಂದು ಹೇಳಿದರು.
ಶಾಲೆಯ ಪ್ರಾಚಾರ್ಯ ಶೈಜು ನಾಯರ್ ಮಾತನಾಡಿ, ಶಾಲೆಯಲ್ಲಿ ಮಕ್ಕಳ ನೈತಿಕ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಮಾಡುತ್ತಿರುವ ಶಾಲಾ ಕಾರ್ಯ ಚಟುವಟಿಕೆಗಳ ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿದರು.
ಶಿಕ್ಷಕ ಭೈರವ ಭಂಡಾರಿ, ದೀಪಾ ಜಂಬೂರೆ, ಜೈನಾಬ್ ಮೋಮಿನ್, ಯೋಗಿರಾಜ ಹಳಕಟ್ಟಿ, ಸಾವಿತ್ರಿ ನಿಂಬಾಳ್ಕರ ಇದ್ದರು.
‘ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನ’
ವಿಜಯಪುರ: ‘ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಪುರಾಣ, ಪುಣ್ಯ ಕಥೆಗಳಲ್ಲಿ ಗುರುವಿಗೆ ಸಿಕ್ಕ ಸ್ಥಾನ ಎಂತಹದ್ದು ಎಂದು ತಿಳಿಯಬಹುದು. ರಾಮಾಯಣದಲ್ಲಿ ರಾಮ ಮರ್ಯಾದಾ ಪುರುಷೋತ್ತಮ ಎಂದೆನಿಸಿಕೊಳ್ಳಲು ವಸಿಷ್ಠ ಗುರುವೇ ಕಾರಣ’ ಎಂದು ಶಾಂತಿನಿಕೇತನ ಸಂಸ್ಥೆಯ ಚೇರಮನ್ ಸುರೇಶ ಬಿರಾದಾರ ಹೇಳಿದರು.
ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ವ್ಯಾಸ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಶರತ್ ಬಿರಾದಾರ ಮಾತನಾಡಿ, ‘ವಿದ್ಯಾರ್ಥಿಗಳು ಗುರಿ ಸಾಧಿಸಬೇಕೆಂದರೆ ಗುರುವಿನ ಮಾರ್ಗದರ್ಶನ ಬೇಕು. ಗುರು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗ ತೋರಿಸಿ ಸಮಾಜದ ಸತ್ಪ್ರಜೆಯನ್ನಾಗಿ ಮಾಡುವ ಶಕ್ತಿಯನ್ನು ಹೊಂದಿದ್ದಾನೆ’ ಎಂದರು.
ಸಂಸ್ಥೆಯ ನಿರ್ದೇಶಕಿ ದಿವ್ಯಾ ಬಿರಾದಾರ, ಪ್ರಾಚಾರ್ಯ ಶೀಧರ ಕುರಬೇಟ್, ಪ್ರವೀಣಕುಮಾರ ಗೆಣ್ಣೂರ್, ಎ.ಎಚ್. ಸಗರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.