ಹೊರ್ತಿ: ಸಮೀಪದ ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನಕನಾಳ ಗ್ರಾಮದಲ್ಲಿ ಹುಬ್ಬಿ, ಉತ್ತರಿ ಮಳೆಗಳು ಸತತವಾಗಿ ಸುರಿಯುತ್ತಿದ್ದು ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಬಂದಿದ್ದು ಸಂಚಾರ ಬಂದ್ ಆಗಿದ್ದಲ್ಲದೇ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ.
ಭಾರಿ ಮಳೆಗೆ ಸೇತುವೆ ಬಿರುಕು ಬಿಟ್ಟಿದೆ. ಡಾಂಬರೀಕರಣ ರಸ್ತೆಯು ಕಿತ್ತುಹೋಗಿ ತಗ್ಗುಗುಂಡಿಗಳಿಂದ ತುಂಬಿಕೊಂಡಿವೆ. ಈ ಹಳ್ಳಕ್ಕೆ ಇಂಚಗೇರಿ ಹಾಗೂ ಮಹಾವೀರನಗರ ತಾಂಡಾದ ಗುಡ್ಡಗಳಿಂದ ಹರಿದು ಬರುವ ನೀರು ಅಷ್ಟೇ ಅಲ್ಲದೇ ಮಹಾರಾಷ್ಟ್ರದ ಗಿರಗಾಂವ ಗ್ರಾಮದ ಹಳ್ಳದ ನೀರು ಸೇರ್ಪಡೆಯಾಗುವದು. ಮತ್ತೊಂದು ಹಳ್ಳಿ ಸಂಗಮವಾಗಿ ತೊಂದರೆ ಕೊಡುತ್ತಿದೆ.
ಪರ್ಯಾಯ ಮಾರ್ಗವೇ ಇಲ್ಲದೇ ದಿನಂಪ್ರತಿ ಇದೇ ರಸ್ತೆ ಬಳಸಿ ವಿದ್ಯಾರ್ಥಿಗಳು, ನಾಗರಿಕರು ರೈತರು ಸಂಚರಿಸುತ್ತಿದ್ದರು. ಈಗ ನೀರು ಬಂದಿದ್ದರಿಂದ ಮತ್ತು ಬಿರುಕು ಬಿಟ್ಟ ಸೇತುವೆ ಬಾರಿ ಮತ್ತು ಸಣ್ಣ ಪ್ರಮಾಣದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ನೀರು ಬಂದು ಎಲ್ಲಾ ಕಾರ್ಯಗಳು ಸ್ಥಗಿತಗೊಂಡಿವೆ.
ಬೆಳೆ ನಾಶ ರೈತರ ಪರಸ್ಥಿತಿ ದುಸ್ತರ : ಸತತ ಮಳೆಯಿಂದ ಗೋವಿನ ಜೋಳ, ತೊಗರಿ, ಶೇಂಗಾ ಮುಂತಾದ ಹಿಂಗಾರಿ ಬೆಳೆಗಳು ಜಲಾವೃತಗೊಂಡು ನಾಶಹೊಂದಿವೆ. ಈ ಕೂಡಲೇ ಸರ್ಕಾರ ಪರಿಹಾರ ನೀಡಿ ಸಂಕಷ್ಟದಲ್ಲಿರುವ ರೈತರಿಗೆ ಯೋಗ್ಯ ಪರಿಹಾರ ನೀಡಬೇಕು ಎಂದು ಈ ರೈತರು ಆಗ್ರಹಿಸಿದ್ದಾರೆ.
ಸಂಕಷ್ಟ ಎದುರಿಸುವ ಈ ಹಳ್ಳದ ಸೇತುವೆ ಚಿಕ್ಕದಾಗಿದ್ದು, ಸ್ವಲ್ಪವೇ ನೀರು ಬಂದರೂ ಕೂಡ ಸೇತುವೆ ಬಂದಾಗುತ್ತದೆ. ಸಂಚಾರಕ್ಕೆ ತೊಂದರೆಯಾಗುತ್ತದೆ. ಬೇಗನೇ ದೊಡ್ಡ ಸೇತುವೆ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಶಾಸಕರಲ್ಲಿ ಮನವಿ ಮಾಡಿ ,ಆಗ್ರಹಿಸಿದರು.
ಶಾಸಕರ ಭೇಟಿ: ಕನಕನಾಳ ಹಳ್ಳದ ನೀರನ್ನು ಪರಿಶೀಲಿಸಲು ಶಾಸಕ ವಿಠಲ ಕಟಕದೊಂಡ, ತಹಶೀಲ್ದಾರ ಸಂಜೀವ ಇಂಗಳೆ, ತಾಲೂಕ ಮುಖ್ಯ ಕಾರ್ಯನಿರ್ವಾಹಕಾರಿ ಸಂಜು ಕಡಗೇಖರ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ದಯಾನಂದ ಮಠ, ಎಸ್ ಎಂ ಪಾಟೀಲ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ, ಜಿ. ಪಂ ಸಿಬ್ಬಂದಿ ಮತ್ತು ಚಡಚಣ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ರವಿದಾಸ ಜಾಧವ, ಇಂಚಗೇರಿ ಗ್ರಾ.ಪಂ ಅಧ್ಯಕ್ಷ ರವಿ ಚವ್ಹಾಣ, ಪಿಡಿಒ ವಿಶ್ವನಾಥ ರಾಠೋಡ ಅವರು ಭೇಟಿ ನೀಡಿ ಜಲಾವೃತ ಪರಿಶೀಲಿಸಿದರು. ನಂತರ ಶಾಸಕ ಕಟಕದದೊಂಡ ಬೇಗನೆ ಸೇತುವೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದರು.
ಈ ವೇಳೆ, ಇಂಚಗೇರಿ ಗ್ರಾ ಪಂ ಉಪಾಧ್ಯಕ್ಷ ಮಾಳಪ್ಪ ಬಿರಾದಾರ, ಮಹಾದೇವ ನಾವಿ, ರೇವಣಸಿದ್ಧ ಮಾನೆ, ಮಹಾದೇವ ಪೂಜಾರಿ, ಅಮಸಿದ್ಧ ಪೂಜಾರಿ ಹಾಗೂ ಗ್ರಾಪಂ ಸದಸ್ಯರು ಅಲ್ಲದೇ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.