ADVERTISEMENT

ಕೃಷಿ ಕಾಯ್ದೆ ವಿರೋಧಿಸಿ ಹುಬ್ಬಳ್ಳಿ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ ತಡೆ

ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 11:35 IST
Last Updated 6 ಫೆಬ್ರುವರಿ 2021, 11:35 IST
ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ಹುಬ್ಬಳ್ಳಿ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 218 ಬಂದ್ ಮಾಡಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು 
ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ಹುಬ್ಬಳ್ಳಿ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 218 ಬಂದ್ ಮಾಡಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು    

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಹಾಗೂ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ನಗರದ ಸಿಂದಗಿ ಬೈಪಾಸ್ ಬಳಿ ಹುಬ್ಬಳ್ಳಿ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 218 ಬಂದ್ ಮಾಡಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.

ಸುಡುವ ಬಿರು ಬಿಸಿಲನ್ನು ಲೆಕ್ಕಿಸದೇ ಮೂರು ಗಂಟೆಗಳ ಕಾಲ ಹೆದ್ದಾರಿ ಮೇಲೆ ಕುಳಿತುಜೈಜವಾನ್, ಜೈಕಿಸಾನ್ ಘೋಷಣೆಗಳನ್ನು ಮೊಳಗಿಸಿದರು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.

ರೈತ ಕೃಷಿಕಾರ್ಮಿಕರ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಅಖಂಡ ಕರ್ನಾಟಕ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘಟನೆ, ರೈತ ಸಂಘ ಮತ್ತು ಹಸಿರು ಸೇನೆ, ಆಲ್ ಇಂಡಿಯಾ ಯುನೈಟೆಡ್ ಯುನಿಯನ್, ಸಿಐಟಿಯು, ಎಐಡಿಎಸ್‌ಓ, ಎಐಡಿವೈಓ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವಾರು ಸಂಘಟನೆಗಳ ಕಾರ್ಯಕರ್ತರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ADVERTISEMENT

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಸಿ ಕಲಾದಗಿ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರ ಬೆನ್ನಿಗೆ ಚೂರಿ ಇರಿದಿದೆ ಎಂದರು.

ರೈತ ಹೋರಾಟದಿಂದ ಬಿಜೆಪಿಯು ಹತಾಶೆಗೊಂಡು ಕೆಂಪುಕೋಟೆ ಮೇಲೆ ಧ್ವಜಾರೋಹಣ ಪ್ರಕರಣದ ಕುರಿತು ದಿನಕೊಂದು ನಾಟಕ ಹುಟ್ಟುಹಾಕುತ್ತಿದೆ ಎಂದು ದೂರಿದರು.

ಆರ್.ಕೆ.ಎಸ್‍ನ ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ ಮಾತನಾಡಿ, ಕಾರ್ಪೊರೇಟ್ ಮನೆತನಗಳ ಪರವಾದ ನೀತಿಗಳ ವಿರುದ್ಧ ಇಡೀ ದೇಶದ ಜನತೆ ಅನ್ನದಾತರ ಜೊತೆಗೆ ನಿಂತು ಹೋರಾಡುತ್ತಿರುವುದು ಪ್ರಧಾನಮಂತ್ರಿಗಾಗಲಿ, ಸರ್ಕಾರಕ್ಕಾಗಲಿ ಕಾಣದಿರುವುದು ದುರಂತದ ವಿಷಯವಾಗಿದೆ ಎಂದರು.

ಅಖಿಲ ಭಾರತ ಕಿಸಾನ್ ಸಭಾ ಪ್ರಕಾಶ ಹಿಟ್ಟನಳ್ಳಿ ಮಾತನಾಡಿ, ಈ ಹೋರಾಟವು ರೈತರ ಅಳಿವು ಉಳಿವಿನ ಹೋರಾಟವಾಗಿದ್ದು, ಖಾಸಗಿ ಕಂಪನಿಗಳ ದುರಾಸೆಗೆ ವಿರುದ್ಧವಾಗಿ ಹಾಗೂ ರೈತರು ತಮ್ಮ ಜೀವನಕ್ಕಾಗಿ ಹೋರಾಡುತ್ತಿದ್ದಾರೆ. ದೇಶದ ಜನತೆಯ ಬೆಂಬಲಕ್ಕೆ ನಿಲ್ಲಬೇಕಾದ ಸರ್ಕಾರವು ಬಂಡವಾಳಶಾಹಿಗಳ ಪರವಾಗಿ ನಿಂತಿದೆ ಎಂದರು.

ದೇಶದ ಜನತೆಯ ಸಂಪತ್ತನ್ನು ಕೇಂದ್ರ ಸರ್ಕಾರ ಖಾಸಗಿಕರಣ ಮಾಡುತ್ತಿದೆ. ರೈತರು ಜಾಗೃತಗೊಂಡು ಹೋರಾಟಕ್ಕೆ ಮುನ್ನುಗ್ಗಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘಟನೆಯ ಚಂದ್ರೇಗೌಡ ಪಾಟೀಲ ಮಾತನಾಡಿ, ಈ ಕರಾಳ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದೆವರಿಯಲಿದೆ ಎಂದರು.

ರೈತ ಮುಖಂಡ ಶಕ್ತಿಕುಮಾರ ಉಕುಮನಾಳ ಮಾತನಾಡಿ, ಮೋದಿಯವರು ರೈತರನ್ನು ಬೀದಿಪಾಲು ಮಾಡಲು ಹೊರಟಿದ್ದಾರೆ. ಆದರೆ, ರೈತರ ಬೇಡಿಕೆ ಕೂಡಲೆ ಈಡೇರಿಸದಿದ್ದರೆ ಸ್ವತ: ಮೋದಿಯವರೇ ಬೀದಿಪಾಲಾಗಲಿದ್ದಾರೆ ಎಂದರು.

ಆರ್.ಕೆ.ಎಸ್‍ನ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ಇಡೀ ದೇಶದ ರೈತ ಶಕ್ತಿ ಒಟ್ಟುಗೂಡಿ ಇಂದು ಹೋರಾಟಕ್ಕಿಳಿದಿದೆ ಎಂದರು.

ಮುಖಂಡರಾದ ಮಲ್ಲಿಕಾರ್ಜುನ ಎಚ್.ಟಿ, ಅಕ್ರಮ್‌ ಮಾಶಾಳಕರ, ಲಕ್ಷ್ಮಣ ಹಂದ್ರಾಳ, ಫಯಾಜ್ ಕಲಾದಗಿ ಅಣ್ಣಾರಾಯ ಇಳಗೇರ, ಎಸ್. ಬಿ ಚಿಂಚೊಳ್ಳಿ, ಸದಾನಂದ ಮೋದಿ, ಸುರೇಖಾ ರಜಪೂತಪ್ರತಿಭಟನೆಯಲ್ಲಿ ಮಾತನಾಡಿದವರು.

ದುಂಡೇಶ ಬಿರಾದಾರ, ತಿಪ್ಪರಾಯ ಹತ್ತರಕಿ, ದಸ್ತಗೀರ ಉಕ್ಕಲಿ, ಮಹಾದೇವಿ. ಸುಜಾತಾ ಸಿಂಧೆ, ಶಂಕರಗೌಡ ಪಾಟೀಲ, ಸುರೇಖಾ ಕಡಪಟ್ಟಿ, ಸುಮಿತ್ರಾ ಘೋಣಸಗಿ, ಕಾಜೇಸಾಬ ಕೋಲಾರ, ಬಸೀರ್‌ ಅಹಮದ್ ಕಾಂಬಳೆ, ಅನ್ವರ್‌ ಹುಸೇನ್‌ ಮುಲ್ಲಾ, ಸರಸ್ವತಿ ಮಠ, ಕುಮಾರಗೌಡ ಪಾಟೀಲ, ರಮೇಶ ತಳವಾರ, ದಾವಲಸಾಬ್‌ ಜಮಾದಾರ, ಮುರಿಗೆಪ್ಪ ಕೋಳಕೂರ, ಭೀಮಸಿ ಕೋಟ್ಯಾಳ, ಸೋನಾಬಾಯಿ ಬ್ಯಾಳಿ, ಸಂಗಪ್ಪ ಕಪಾಲಿ, ಅನಸೂಯ ಹಜೇರಿ, ಸಾಯಬ್ಬಿ ಶೇಕ್ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.