ತಿಕೋಟಾ: ರಾಜ್ಯದಲ್ಲಿಯೇ ಬಬಲೇಶ್ವರವನ್ನು ಸಂಪತ್ಭರಿತ ಕ್ಷೇತ್ರ ಮಾಡುವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಸಚಿವ ಡಾ.ಎಂ.ಬಿ. ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಆರಂಭವಾದ ಹಿಂದೂ–ಮುಸ್ಲಿಂ ಭಾವೈಕ್ಯ ಬೆಸೆಯುವ ಹಾಜಿಮಸ್ತಾನ ಉರುಸ್ನಲ್ಲಿ ಭಾಗವಹಿಸಿ ಹಾಜಿಮಸ್ತಾನ ಹಾಗೂ ಬಡಕಲ್ ಸಾಹೇಬ ದೇವರ ದರ್ಶನ ಪಡೆದು ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ಮೂಲ ಕಾಲುವೆಯ ಉಪಕಾಲುವೆಗಳ ಕಾಮಗಾರಿ ಬಾಕಿ ಇವೆ. ಹಿಂದಿನ ಸರ್ಕಾರ ಮಾಡಿದ ರಾಜಕೀಯತನದಿಂದಾಗಿ ಆ ಕಾರ್ಯ ಆಗಿಲ್ಲ. ಬಹುಷಃ ದೇವರು ನನ್ನಿಂದಲೇ ಆ ಕಾರ್ಯ ಆಗಬೇಕೆನ್ನುವ ಆಶೀರ್ವಾದ ನೀಡಿರಬೇಕು. ಅದಕ್ಕೆ ಮತ್ತೆ ನಮ್ಮ ಸರ್ಕಾರ ಬಂದಿದೆ. ಎಲ್ಲರೂ ಶಾಂತಿ ಸೌಹಾರ್ದದಿಂದ ಇರಬೇಕು’ ಎಂದು ತಿಳಿಸಿದರು.
ತಹಶೀಲ್ದಾರ ಪ್ರಶಾಂತ ಚನಗೊಂಡ, ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರಿ ಎಚ್.ಎ. ಡಾಲಾಯತ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಾತಲಿಂಗಯ್ಯಾ ಸಾಲಿಮಠ, ಶಾನೂರ ನಂದರಗಿ, ಹಣಮಂತ ಬ್ಯಾಡಗಿ, ನಜೀರ ನಂದರಗಿ, ಜೆ.ಎಂ. ಪಾಟೀಲ್, ವಿ.ಎಂ. ಪಾಟೀಲ್, ಮಮ್ಮು ಮುಜಾವರ, ಜೀವಪ್ಪಾ ಖುರ್ಪಿ, ಶಿವಾನಂದ ಚೌಧರಿ ಇದ್ದರು.
ಕಾಲುವೆ ಪೂರ್ಣಗೊಳಿಸಲು ಮನವಿ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ತಿಕೋಟಾ ಭಾಗದಲ್ಲಿ ಹಲವು ಕಾಲುವೆ ಹಾಗೂ ಉಪಕಾಲುವೆ ಕಾಮಗಾರಿ ಬಾಕಿ ಇದ್ದು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕು. ಈಗಾಗಲೇ ರೈತರು ನೀರಿನಲ್ಲದೇ ಹೈರಾಣಾಗುತ್ತಿದ್ದು, ಅಂತರ್ಜಲ ಕಡಿಮೆಯಾಗಿ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ತುರ್ತಾಗಿ ಕೃಷ್ಣಾ ನದಿಯಿಂದ ಕಾಲುವೆಗಳಿಗೆ ನೀರು ಹರಿಸಿ ರೈತರಿಗೆ ಅನೂಕೂಲ ಮಾಡಿಕೊಡಬೇಕು’ ಎಂದು ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.