ಇಂಡಿ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಬೆಳೆಗಳಿಗೆ ಎಂಎಸ್ಪಿ ನಿಗದಿ ಹಾಗೂ ರೈತರ ಸಾಲಮನ್ನಾಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಲಾಳಸಂಗಿಯಲ್ಲಿ ಗುರುವಾರ ಆಯೋಜಿಸಿದ್ದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಅಲಗೂರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮಹಾಲಕ್ಷ್ಮಿ ಯೋಜನೆಯಡಿ ಎಲ್ಲ ಜಾತಿ ವರ್ಗಗಳ ಬಡ ಮಹಿಳೆಯರಿಗೆ ₹1 ಲಕ್ಷ ಧನ ಸಹಾಯ ಸಿಗಲಿದೆ. ರಾಜ್ಯದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಈಗಾಗಲೇ ಈಡೇರಿಸಿದೆ. ಕೇಂದ್ರದಲ್ಲೂ ಅಧಿಕಾರಕ್ಕೆ ಬಂದರೆ ಘೋಷಿತ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಲಿದೆ ಎಂದರು.
10 ವರ್ಷ ಆಡಳಿತದಲ್ಲಿ ಪ್ರಧಾನ ಮಂತ್ರಿ ಮೋದಿ ಸರ್ಕಾರ ಒಂದೇ ಒಂದು ಯೋಜನೆ ಮಾಡಿಲ್ಲ. ಬಿಜೆಪಿ ಮುಖಂಡರು ಸ್ವಿಸ್ ಬ್ಯಾಂಕ್ನಿಂದ ಕಪ್ಪು ಹಣ ತರುತ್ತೇನೆ ಎಂದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಆದಾಯ ದ್ವಿಗುಣ, ನದಿಗಳ ಜೋಡಣೆ, ಯುವಕರಿಗೆ ಉದ್ಯೋಗ ಈಡೇರಿಸುವುದಾಗಿ ಹೇಳಿ ಇದಾವುದೂ ಮಾಡಿಲ್ಲ ಎಂದು ಆರೋಪಿಸಿದರು.
ಇದೊಂದು ಬಾರಿ ರಾಜು ಆಲಗೂರ ಅವರಿಗೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.
ಮದ್ದಾನೆ ಮಹಾರಾಜರು, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ರುದ್ರೇಶ ಅಲಗೊಂಡ, ಭೀಮಣ್ಣ ಕೌಲಗಿ ಮಾತನಾಡಿದರು. ದಸ್ತಗೀರ ದೇವರ ನಾವದಗಿ, ಸಂಜು ಮಾರನೂರ, ಸಿದ್ದರಾಮಗೌಡ ಪಾಟೀಲ, ವೈ.ಬಿ.ಬಗುಂಡಿ, ಮಾಡಪ್ಪ ಪೂಜಾರಿ, ಸಿಧಾರ್ಥ ಮೈದರಗಿ, ಸೊಂದೆಸಾಬ ದೇವರನಾವದಗಿ, ಪ್ರಕಾಶ ಶಿವಪುರ, ಪ್ರಕಾಶ ಅಲಗೊಂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.