
ಪ್ರಜಾವಾಣಿ ವಾರ್ತೆ
ಇಂಡಿ: ‘ ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡಲು ಒತ್ತಾಯಿಸಿ ಕಳೆದ 7 ದಿನಗಳಿಂದ ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೈತ ಸಂಘದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹದ ಪ್ರಯುಕ್ತ ಇಂದು ರೈತರಿಗೆ ನ್ಯಾಯ ಸಿಕ್ಕಂತಾಗಿದೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ.ಕೆಂಬೋಗಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರವು ಪ್ರತಿ ಟನ್ ಕಬ್ಬಿಗೆ ₹3,300 ದರ ನೀಡಲು ತೀರ್ಮಾನಿಸಿದೆ. ಇದು ರೈತರ ಶ್ರಮ ಹಾಗೂ ಅನ್ನದಾತರ ಒಗ್ಗಟ್ಟಿನ ಹೋರಟಕ್ಕೆ ಸಿಕ್ಕ ಪ್ರತಿಫಲ’ ಎಂದರು.
‘ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಶ್ರಮಿಸಿ ಹೋರಾಟದಲ್ಲಿ ಭಾಗಿಯಾದ ಎಲ್ಲಾ ರೈತರಿಗೂ ಪಕ್ಷಾತೀತವಾಗಿ ಬೆಂಬಲ ನೀಡಿದ ತಾಲ್ಲೂಕಿನ ಮಠಾಧೀಶರು, ರಾಜಕೀಯ ಮುಖಂಡರಿಗೆ, ಎಲ್ಲರಿಗೂ ಧನ್ಯವಾದಗಳು’ ಎಂದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಪ್ಪ ತಳವಾರ, ರೈತ ಮುಖಂಡ ಮಲ್ಲು ಗುಡ್ಲ, ತಮ್ಮಣ ಆಸಂಗಿ, ಮಲ್ಲಿಕಾರ್ಜುನ ನಾವದಗಿ, ಸೋಮಣ್ಣ ಗುಡ್ಲ, ಹಣಮಂತ ಗುಡ್ಲ ಇದ್ದರು.