ADVERTISEMENT

₹18.36 ಲಕ್ಷ ಮೌಲ್ಯದ ಚಿನ್ನಾಭರಣ ವಶ: ಎಸ್‌ಪಿ

ತೋಟದ ವಸ್ತಿ ಒಂಟಿ ಮನೆಗಳ ಕಳ್ಳತನ; ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 12:38 IST
Last Updated 13 ಡಿಸೆಂಬರ್ 2022, 12:38 IST
ವಿಜಯಪುರ ನಗರ ಪೊಲೀಸರು  ವಶಪಡಿಸಿಕೊಂಡಿರುವ ಕಳುವಾಗಿದ್ದ ಬೈಕುಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಪರಿಶೀಲಿಸಿದರು
ವಿಜಯಪುರ ನಗರ ಪೊಲೀಸರು  ವಶಪಡಿಸಿಕೊಂಡಿರುವ ಕಳುವಾಗಿದ್ದ ಬೈಕುಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಪರಿಶೀಲಿಸಿದರು   

ವಿಜಯಪುರ: ಬಬಲೇಶ್ವರ, ತಿಕೋಟಾ, ಹೊರ್ತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ತೋಟದ ಮನೆಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ₹18.36 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಸಿಂದಗಿ ಕಲ್ಯಾಣ ನಗರದ ಶ್ರೀಕಾಂತ ಹರಿಜನ,ಹಿಟ್ನಳ್ಳಿಯ ಜೈಭೀಮ ಪಡಕೋಟಿ ಮತ್ತು ಆಕಾಶ ಕಲ್ಲವ್ವಗೋಳ ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸಿರುವುದಾಗಿ ಹೇಳಿದರು.

ಕಾರಜೋಳ ಕ್ರಾಸ್ ಹತ್ತಿರ ಸೋಮವಾರ ರಾತ್ರಿ 11ಕ್ಕೆ ಕಾರಿನಲ್ಲಿ (ಕೆಎ19 ಎಂಸಿ 5832) ಸಂಯಾಸ್ಪದವಾಗಿ ಓಡಾಡುತ್ತಿರುವಾಗ ತಡೆದು, ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳುಸವನಳ್ಳಿಯಸೋಮನಾಥ ಬಗಲಿ ಅವರ ತೋಟದ ಮನೆಯ ಹಿಂದಿನ ಬಾಗಿಲು ಮುರಿದು, ಮನೆಯಲ್ಲಿದ್ದ 9.3 ತೊಲೆಬಂಗಾರ ಆಭರಣಗಳನ್ನು ಕಳ್ಳತನ ಮಾಡಿ, ಅದನ್ನು ಮಾರಾಟ ಮಾಡಲು ಹೊರಟಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದರು.

ADVERTISEMENT

ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೆ ಓಳಪಡಿಸಿದಾಗ ವಿಜಯಪುರ ಗ್ರಾಮೀಣ, ತಿಕೋಟಾ ಪೊಲೀಸ್‌ ಠಾಣೆ, ಹೊರ್ತಿ ಪೊಲೀಸ್ ಠಾಣೆ ಹಾಗೂ ಕಲಬುರ್ಗಿ ಜಿಲ್ಲೆಯ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಸಹ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದರು.

ಒಟ್ಟು ₹ 12.50 ಲಕ್ಷ ಮೌಲ್ಯದ 250 ಗ್ರಾಂಬಂಗಾರ ಆಭರಣ, ₹36 ಸಾವಿರ ಮೌಲ್ಯದ 600 ಗ್ರಾಂಬೆಳ್ಳಿಯ ಆಭರಣ, ₹5.5 ಲಕ್ಷ ಮೌಲ್ಯದ ಕಾರು ಹಾಗೂಕೃತ್ಯಕ್ಕೆ ಉಪಯೋಗಿಸಿದ ಕಬ್ಬಿಣದ ರಾಡು, ಸುತ್ತಿಗೆ, ಚಾಣ ಇತರೆ ಸಾಮಗ್ರಿಗಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಂಕರ ಮಾರಿಹಾಳ,ವಿಜಯಪುರ ಉಪವಿಭಾಗದಡಿಎಸ್‌ಪಿ ಸಿದ್ದೇಶ್ವರ ಕೃಷ್ಣಾಪೂರ, ವಿಜಯಪುರ ಗ್ರಾಮೀಣ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂಗಮೇಶ ಪಾಲಭಾವಿ, ಪಿ.ಎಸ್.ಐಬಿ.ಎ.ತಿಪ್ಪರಡ್ಡಿ, ಆರ್. ಡಿ. ಕೂಸೂರ, ಎಸ್‌ಐ ದಡ್ಡಿ, ವಾಲಿಕಾರ, ಸಿಬ್ಬಂದಿ ಎಲ್. ಎಸ್. ಹಿರೇಗೌಡ , ಆರ್. ಡಿ. ಅಂಜುಟಗಿ, ಎಸ್. ಆರ್. ಉಮನಾಬಾದಿ, ಎ. ಆರ್. ಮಾಳಗೊಂಡ, ಎಸ್. ಟಿ. ಕಟೆ, ಆರ್. ಎಸ್. ಇಂಗಳಗಿ, ಬಿ.ಎಸ್. ಬಿರಾದಾರ, ಕೆ.ವೈ. ಕರಿಕಟ್ಟಿ, ಎಂ.ಎ. ಹಳ್ಳಿ, ಆರ್.ಪಿ. ಪೂಜಾರಿ, ಕೆ.ಪಿ. ಪೂಜಾರಿ, ಐ.ವೈ. ದಳವಾಯಿ, ಎ.ಎಸ್.ಬಿರಾದಾರ, ಪಿ.ಆರ್ ವಾಲೀಕಾರ, ಮಲ್ಲು ಕಣಮುಚನಾಳ, ಲಾಯಪ್ಪ ದಂದರಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇಬ್ಬರು ಬೈಕ್‌ ಕಳ್ಳರ ಬಂಧನ

ವಿಜಯಪುರ ನಗರದಲ್ಲಿ ಬೈಕ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದ ಸಿಂದಗಿ ಬೈಪಾಸ್ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದಾಗ ಸಂಶಯಾಸ್ಪದವಾಗಿ ಬೈಕಿನಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಹಿಡಿದು, ಅವರಿಂದ ₹3.60 ಲಕ್ಷ ಕಿಮ್ಮತ್ತಿನ ಏಳು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌.ಪಿ.ಆನಂದಕುಮಾರ್‌ ತಿಳಿಸಿದರು.

ಅಪ್ಸರಾ ಟಾಕೀಸ್ ಹತ್ತಿರ ರಂಗೀನ ಮಸೀದಿ ಗಲ್ಲಿಯ ನಜೀರ ಜಾತಗಾರ(26), ಇಂಡಿ ರಸ್ತೆ ಸುಣ್ಣದಭಟ್ಟಿ ಹತ್ತಿರದ ನಿವಾಸಿ ಅವಿನಾಶ ವಜ್ಜಣ್ಣವರ(20) ಬಂಧಿತ ಬೈಕ್‌ ಕಳ್ಳರಾಗಿದ್ದಾರೆ ಎಂದರು.

ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಬೈಕ್‌ ಸೇರಿದಂತೆ ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ 4 ಬೈಕುಗಳನ್ನು ಕಳವು ಮಾಡಿರುವುದನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದರು.

ಆನ್‌ಲೈನ್‌ ಸಾಲ ವಂಚನೆ: ಆರೋಪಿ ಬಂಧನ

ವಿಜಯಪುರ: ‘ಕರ್ನಾಟಕ ಸಾಲ ಒದಗಿಸುವವರು’ ಎಂಬಫೇಸ್‌ಬುಕ್‌ ಪೇಜ್‌ ಮೂಲಕ ಸಾಲ ಮಂಜೂರು ಮಾಡಲು ₹ 42 ಸಾವಿರವನ್ನು ಫೋನ್‌ ಪೇ ಮೂಲಕ ಹಣ ಪಡೆದು ಮೋಸ ಮಾಡಿದ್ದ ಆರೋಪದ ಮೇರೆಗೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮದ ರುದ್ರಮುನಿ ಬಂಡೆಗೊಂಚಿಗೇರಿ(37) ಎಂಬಾತನನ್ನು ವಿಜಯಪುರ ಎನ್‌ಇಎನ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ ಎಂದು ಎಚ್‌.ಡಿ.ಆನಂದಕುಮಾರ್‌ ತಿಳಿಸಿದರು.

ತಿಕೋಟಾ ತಾಲ್ಲೂಕಿನ ತೊರವಿಯ ಮಹೇಶ ಬಿರಾದಾರ ಎಂಬುವವರ ಮೊಬೈಲ್‌ ಫೋನ್‌ ನಂಬರ್‌ಗೆ ಸಂದೇಶ ಕಳುಹಿಸಿ, ನಿಮಗೆ ₹7.90 ಲಕ್ಷ ಸಾಲ ಕೊಡುತ್ತೇವೆ ಎಂದು ನಂಬಿಸಿ, ವಿವಿಧ ಕಾರಣಗಳನ್ನು ನೀಡಿ ದೂರದಾರರಿಂದ ₹42 ಸಾವಿರವನ್ನು ಪಡೆದು, ಬಳಿಕ ಸಾಲ ನೀಡದೇ ಮೋಸ ಮಾಡಿದ್ದನು ಎಂದು ತಿಳಿಸಿದರು.

ಡಿಸಿಆರ್‌ಬಿ ಡಿಎಸ್‌ಪಿ ಜೆ.ಎಸ್‌.ನ್ಯಾಮಗೌಡರ ಮತ್ತು ಸಿಇಎನ್‌ ಕ್ರೈಂ ಬ್ರಾಂಚಿನ ಪೊಲೀಸ್‌ ಇನ್‌ಸ್ಟೆಕ್ಟರ್‌ ರಮೇಶ ಅವಜಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.