ವಿಜಯಪುರ: ಇಡೀ ದೇಶದಲ್ಲಿ ಕರ್ನಾಟಕ ಇತಿಹಾಸ ಪರಂಪರೆಯಲ್ಲಿ ಅತ್ಯಂತ ಶ್ರೀಮಂತವಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಐತಿಹಾಸಿಕ ಸ್ಮಾರಕಗಳಿವೆ ಎಂದು ಇತಿಹಾಸ ತಜ್ಞ ಡಾ.ಕೆ.ಪದ್ದಯ್ಯ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಯನ ವಿಭಾಗ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ಇತಿಹಾಸ ಪರಿಷತ್ತಿನ 32ನೇ ವಾರ್ಷಿಕ ಮಹಾ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸ ಮತ್ತು ಪ್ರಾಚ್ಯವಸ್ತು ಸಂಶೋಧನೆಯಲ್ಲಿ ಕರ್ನಾಟಕ ಮಹತ್ವದ ಸಾಧನೆ ಮಾಡಿದ್ದು, ಹಲವಾರು ಇತಿಹಾಸಕಾರರು ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ಇತಿಹಾಸ ಪರಿಷತ್ತಿನ ಜಾಲತಾಣ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಅಶ್ವತ್ಥನಾರಾಯಣ, ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಈ ಡಿಜಿಟಲ್ ಯುಗ ಈ ಹಿಂದಿನ ಎಲ್ಲಾ ಯುಗಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ ಎಂದರು.
ನಾವು ಡಿಜಿಟಲ್ ಸಂಸ್ಕೃತಿಯ ಒಳಗೆ ಪ್ರವೇಶ ಪಡೆದ ನಂತರವೇ ನಮ್ಮ ಚರಿತ್ರೆಯ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಡಿಜಿಟಲ್ ಸಂಸ್ಕೃತಿಗೆ ನಾವು ಒಗ್ಗಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ವಿವಿಯ ಕುಲಸಚಿವ ಪ್ರೊ. ಬಿ.ಎಸ್.ನಾವಿ ಮಾತನಾಡಿ, ಇತಿಹಾಸ ಎನ್ನುವುದು ಪ್ರತಿಯೊಂದು ವಿಷಯಗಳಲ್ಲಿಯೂ ಬಹಳ ಪ್ರಮುಖವಾಗಿದ್ದು, ಅಭಿವೃದ್ಧಿಗಾಗಿ ನಮಗೆ ಇತಿಹಾಸ ಬೇಕೇಬೇಕು ಎಂದು ಹೇಳಿದರು.
ಧಾರವಾಡದ ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ್. ಎಂ. ಷಡಕ್ಷರಿ, ಬೆಂಗಳೂರಿನ ಪತ್ರಗಾರ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸದಾನಂದ
ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೃಷ್ಣಮೂರ್ತಿ ಬಿಳಿಮಲೆ ಕುಂದಣ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ವಾಸುದೇವ ಬಡಿಗೇರ ಉತ್ತಮ ಪತ್ರಿಕೆಗಳ ಪ್ರಶಸ್ತಿ ಪ್ರದಾನ ಮಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಸ್.ಚಂದ್ರಶೇಖರ, ಪ್ರೊ.ಶಿವರುದ್ರ ಕಲ್ಲೋಳಿಕರ್, ಪ್ರೊ.ವಿರುಪಾಕ್ಷಿ ಪೂಜಾರಹಳ್ಳಿ, ಕರ್ನಾಟಕ ಇತಿಹಾಸ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ.ಐ.ಕೆ.ಪತ್ತಾರ, ಮಹಿಳಾ ವಿವಿಯ ಇತಿಹಾಸ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಲಕ್ಷ್ಮಿದೇವಿ ವೈ, ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಎಸ್. ನಾಗರತ್ನಮ್ಮ, ವಿವಿಯ ಉಪಕುಲಸಚಿವ ಡಾ. ಹನುಮಂತಯ್ಯ ಪೂಜಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.