
ಸಿಂದಗಿ: ಬೆಂಗಳೂರಿನ ಕರ್ನಾಟಕ ಪೊಲೀಸ್ ತಂಡವು ಹುಬ್ಬಳ್ಳಿಯ ರೈಲ್ವೆ ತಂಡವನ್ನು 3–2 ಸೆಟ್ಗಳಿಂದ ಸೋಲಿಸಿ ಆಧುನಿಕ ಭಗೀರಥ ಕಪ್ ವಾಲಿಬಾಲ್ ಪಂದ್ಯಾವಳಿಯ ಚಾಂಪಿಯನ್ ಆಯಿತು.
ಪಟ್ಟಣದ ಎಚ್.ಜಿ. ಪಿಯು ಕಾಲೇಜು ಮೈದಾನದಲ್ಲಿ ಕರ್ನಾಟಕ ವಾಲಿಬಾಲ್ ಸಂಸ್ಥೆ, ಎಂ.ಸಿ. ಮನಗೂಳಿ ಪ್ರತಿಷ್ಠಾನ ಸಹಯೋಗದಲ್ಲಿ ದಿವಂಗತ ಎಂ.ಸಿ. ಮನಗೂಳಿ ಅವರ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಭಗೀರಥ ಕಪ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಫೈನಲ್ ಪಂದ್ಯ ಬುಧವಾರ ರಾತ್ರಿ ನಡೆಯಿತು. ವಿಜೇತ ತಂಡಕ್ಕೆ ₹1ಲಕ್ಷ ನಗದು ಹಾಗೂ ಟ್ರೋಫಿಯನ್ನು ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಮನಗೂಳಿ ವಿತರಿಸಿದರು.
ದ್ವಿತೀಯ ಸ್ಥಾನ ಪಡೆದ ಹುಬ್ಬಳ್ಳಿಯ ರೈಲ್ವೆ ತಂಡ ₹75 ಸಾವಿರ ಬಹುಮಾನ ತನ್ನದಾಗಿಸಿಕೊಂಡಿತು. ತೃತೀಯ ಸ್ಥಾನ ಪಡೆದ ಬೆಂಗಳೂರಿನ ಆರ್ಮಿ ತಂಡವು ₹50 ಸಾವಿರ ಹಾಗೂ ಕುಮಟಾ ಜಿಲ್ಲಾ ತಂಡ ನಾಲ್ಕನೆಯ ಸ್ಥಾನದೊಂದಿಗೆ ₹25 ಸಾವಿರ ಬಹುಮಾನ ಪಡೆದುಕೊಂಡವು.
ಬಹುಮಾನ ವಿತರಣಾ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಆಲಮೇಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಧಿಕ ಸುಂಬಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಗಪ್ರಸಾದ ತಿವಾರಿ ಮೋರಟಗಿ, ಆಲಮೇಲ ಎಪಿಎಂಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀಶೈಲ ಕವಲಗಿ ಹಾಗೂ ಪ್ರೊ.ಅರವಿಂದ ಮನಗೂಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.