ವಿಜಯಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಮೇ 9ರಂದು ನಡೆಯಲಿರುವ ಚುನಾವಣಾ ಕಣದಲ್ಲಿ ಅಂತಿಮವಾಗಿ ಆರು ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ಬಸವರಾಜ ಸುಕಾಲಿ, ಮಹಾದೇವಪ್ಪ ರೆಬಿನಾಳ, ಬಸವರಾಜ ಕುಂಬಾರ, ಶಿವಾನಂದ ಮಂಗಾನವರ, ಜಂಬುನಾಥ ಕಂಚ್ಯಾಣಿ ನಾಮಪತ್ರ ಹಿಂಪಡೆಯುವ ಮೂಲಕ ಕಣದಿಂದ ಹಿಂದೆ ಸರಿದರು.
ಅಂತಿಮ ಕಣದಲ್ಲಿ ಹಾಸಿಂಪೀರ ವಾಲಿಕಾರ, ಮಲ್ಲಿಕಾರ್ಜುನ ಯಂಡಿಗೇರಿ, ಮಲ್ಲಿಕಾರ್ಜುನ ಭೃಂಗೀಮಠ, ಬಂಡೆಪ್ಪ ತೇಲಿ, ಕಲ್ಲಪ್ಪ ಶಿವಶರಣ ಮತ್ತು ಶ್ರೀಶೈಲ ಆಳೂರ ಉಳಿದುಕೊಂಡಿದ್ದಾರೆ.
ಹಾಸಿಂಪೀರ ವಾಲಿಕಾರ, ಮಲ್ಲಿಕಾರ್ಜುನ ಭೃಂಗೀಮಠ, ಬಂಡೆಪ್ಪ ತೇಲಿ ಹಾಗೂ ಮಲ್ಲಿಕಾರ್ಜುನ ಯಂಡಿಗೇರಿ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಡುವ ಲಕ್ಷಣ ಇದೆ.
ಜಿಲ್ಲೆಯಲ್ಲಿ 9 ಸಾವಿರಕ್ಕೂ ಅಧಿಕ ಮತಗಳು ಇದ್ದು, ಈಗಾಗಲೇ ಕೆಲ ಅಭ್ಯರ್ಥಿಗಳು ತುರುಸಿನ ಪ್ರಚಾರ ಕೈಗೊಂಡಿದ್ದು,ಯುಗಾದಿ ಹಬ್ಬದ ಬಳಿಕ ಪ್ರಚಾರ ಇನ್ನಷ್ಟು ಚುರುಕುಗೊಳ್ಳಲಿದೆ.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪ್ರಮುಖ ಅಭ್ಯರ್ಥಿ ಹಾಸಿಂಪೀರ ವಾಲಿಕಾರ,ಮತದಾರರು ನನಗೆ ಅವಕಾಶ ನೀಡಿದರೆ ಮೌಲ್ಯಯುತ ಕಾರ್ಯಕ್ರಮಗಳ ಮೂಲಕ ಹಾಗೂ ಸಾಹಿತ್ಯ ಕ್ಷೇತ್ರದ ಎಲ್ಲರಿಗೂ ಸಮಾನ ಅವಕಾಶ ನೀಡುವ ಮೂಲಕ ರಾಜ್ಯದಲ್ಲೇ ವಿಜಯಪುರ ಕಸಾಪ ಘಟಕವನ್ನು ಮಾದರಿಯನ್ನಾಗಿ ರೂಪಿಸುತ್ತೇನೆ ಎಂದರು.
ಜಿಲ್ಲೆಯ ಪ್ರತಿಭಾನ್ವಿತ ಸಾಹಿತಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶವಿದೆ. ಎಲ್ಲ ವರ್ಗದವರನ್ನು ಒಳಗೊಳ್ಳುವ ಮೂಲಕ ಕನ್ನಡ ಪರ ಕೆಲಸಗಳನ್ನು ಮಾಡಲಾಗುವುದು ಎಂದದು ಹೇಳಿದರು.
****
ಈಗಾಗಲೇ ಎರಡು ಬಾರಿ ಜಿಲ್ಲೆಯ ಮತದಾರರನ್ನು ಭೇಟಿಯಾಗಿ ಮತಯಾಚಿಸಿದ್ದೇನೆ. ಉತ್ತಮ ಬೆಂಬಲ ವ್ಯಕ್ತವಾಗಿದೆ.ಜಿಲ್ಲೆಯಲ್ಲಿ ಈ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ಚರ್ಚೆ ಚುರುಕುಪಡೆದಿದೆ
ಹಾಸಿಂಪೀರ ವಾಲಿಕಾರ, ಅಭ್ಯರ್ಥಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.