ವಿಜಯಪುರ: ‘ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಅದ್ಭುತ ಸಾಧನೆ ಮಾಡುತ್ತಿದೆ. ಇದು ಅತ್ಯಂತ ಹೆಮ್ಮೆಯ ವಿಷಯ’ ಎಂದು ಬಾಹ್ಯಾಕಾಶ ವಿಜ್ಞಾನಿ ಪ್ರೊ.ಕೆ.ಕಸ್ತೂರಿ ರಂಗನ್ ಅಭಿಪ್ರಾಯಪಟ್ಟರು.
ಸಿಂದಗಿ ಪಟ್ಟಣದ ಸಾತವೀರೇಶ್ವರ ಸಭಾಭವನದಲ್ಲಿ ಸಾರಂಗಮಠದ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನದ ಪ್ರಸಕ್ತ ಸಾಲಿನ ‘ಭಾಸ್ಕರ’ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
‘ಚಂದ್ರನ ಅಧ್ಯಯನಕ್ಕೆ ಸಂಬಂಧಿಸಿದಂತೆ ನಾವು ಮಹತ್ತರ ಸಾಧನೆ ಮಾಡಿದ್ದು, ವಿಜಯದ ಹೊಸ್ತಿಲಲ್ಲಿ ಇದ್ದೇವೆ. ಇದಕ್ಕೆ ವಿಕ್ರಂ ಸಾರಾಭಾಯ್, ಪ್ರೊ.ಯು.ಆರ್.ರಾವ್ ಅವರಂತಹ ವಿಜ್ಞಾನಿಗಳ ದೂರದೃಷ್ಟಿಯೇ ಕಾರಣ’ ಎಂದು ಹೇಳಿದರು.
‘ಭಾರತ ಇಂದು ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿದೆ. ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಬೆಳವಣಿಗೆಗಳು ಆಗುತ್ತಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಯುವವಿಜ್ಞಾನಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮ ನಿಜಕ್ಕೂ ಅದ್ಭುತವಾಗಿತ್ತು. ವಿದ್ಯಾರ್ಥಿಗಳಿಂದ ಕೇಳಿಬಂದ ಪ್ರಶ್ನೆಗಳು ವೈಚಾರಿಕತೆಗೆ ಕನ್ನಡಿ ಹಿಡಿದಂತಿದ್ದವು’ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಂ.ಸಿ.ಮನಗೂಳಿ, ಅರುಣ ಶಹಾಪುರ, ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಪ್ರೊ.ಎನ್.ಜಿ.ಕರೂರ, ಎನ್.ಆರ್.ಪೋರವಾಲ, ಎ.ಜಿ.ವಾರದ, ಜಿ.ಎಸ್.ಜೋಗೂರ, ಆರ್.ಬಿ.ಬೂದಿಹಾಳ, ಡಾ.ವಿ.ವಿ.ಸಾಲಿಮಠ, ಡಾ.ಬಿ.ಸಿ.ಉಪ್ಪಿನ, ಹ.ಮ.ಪೂಜಾರ, ಎ.ಬಿ.ಮಸಳಿ, ಎನ್.ಎಸ್.ಹಿರೇಮಠ, ಡಾ.ಎಂ.ಎಸ್.ಚಾಂದಕವಠೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.