ADVERTISEMENT

ಖಾದಿ ಭಾರತೀಯರ ಸಂಸ್ಕೃತಿ, ಗುರುತಿನ ಪ್ರತೀಕ

ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 12:54 IST
Last Updated 28 ಸೆಪ್ಟೆಂಬರ್ 2022, 12:54 IST
ವಿಜಯಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಬುಧವಾರದಿಂದ ಆರಂಭವಾದ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಜಿಲ್ಲಾಧಿಕಾರಿ ವಿಜಯಕುಮಾರ್‌, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೂಲುವ ಮೂಲಕ ಚಾಲನೆ ನೀಡಿದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಬುಧವಾರದಿಂದ ಆರಂಭವಾದ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಜಿಲ್ಲಾಧಿಕಾರಿ ವಿಜಯಕುಮಾರ್‌, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೂಲುವ ಮೂಲಕ ಚಾಲನೆ ನೀಡಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ಖಾದಿ ನಮ್ಮ ದೇಶದ ಗುರುತು, ಸಂಸ್ಕೃತಿ ಆಗಿದೆ ಎಂದುಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌ ಹೇಳಿದರು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದ ವೇಳೆ ಮಹಾತ್ಮ ಗಾಂಧಿ ಅವರು ಬ್ರಿಟಿಷರ ವಿರುದ್ಧ ಅನೇಕ ಬಗೆಯ ಹೋರಾಟಗಳನ್ನು ಸಂಘಟಿಸಿದರು. ಅದರಲ್ಲಿ ಖಾದಿಯನ್ನು ಪ್ರಬಲ ಅಸ್ತ್ರವನ್ನಾಗಿ ಬಳಿಸಿಕೊಂಡರು ಎಂದು ಹೇಳಿದರು.

ADVERTISEMENT

ಗಾಂಧೀಜಿ ಅವರು ಗ್ರಾಮ ಸ್ವರಾಜ್ಯದ ಬಗ್ಗೆ ದೊಡ್ಡ ಕನಸು ಹೊಂದಿದ್ದರು.‌ಸ್ವದೇಶಿ ಚಳವಳಿಯ ಮುಖ್ಯ ಉದ್ದೇಶ ದೇಶಿ ಉತ್ಪನ್ನಗಳ ಬಳಕೆಗೆ ಆದ್ಯತೆ, ವಿದೇಶಿ ವಸ್ತುಗಳ ಬಳಕೆ ತಡೆಯಲು ಜನರನ್ನು ಪ್ರೇರೇಪಿಸಿದರು. ಖಾದಿ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸಬಹುದು ಎಂಬ ಕಾರಣಕ್ಕಾಗಿ ಖಾದಿ ನೇಯಲು ಒತ್ತು ನೀಡಿದರು ಎಂದರು.

ಖಾದಿ ನೈಸರ್ಗಿಕ ವಸ್ತು ಬಳಸಿ ನಿರ್ಮಿಸುವುದರಿ‌ಂದ ಜನರ ಶಕ್ತಿ, ಪರಿಶ್ರಮ ಆಧರಿಸಿದ್ದರಿಂದ ಖಾದಿಗೆ ಗಾಂಧೀಜಿ ವಿಶೇಷ ಒತ್ತು ನೀಡಿದ್ದರು ಎಂದು ಹೇಳಿದರು.

ಖಾದಿ ಬೇಸಿಗೆಯಲ್ಲಿ ತಂಪಾಗಿರುತ್ತದೆ. ಚಳಿಗಾಲದಲ್ಲಿ ಉಷ್ಣವಾಗಿರುತ್ತದೆ. ಆರೋಗ್ಯ ಸಮತೋಲನಕ್ಕೆ ಅನುಕೂಲ ಆಗುತ್ತದೆ ಎಂದರು.

ರಾಷ್ಟ್ರ ಧ್ವಜ ತಯಾರಿಕೆಗೆ ಖಾದಿಯಷ್ಟು ಸೂಕ್ತ ಬೇರಿಲ್ಲ.ಖಾದಿಯಿಂದ ಮಾತ್ರ ರಾಷ್ಟ್ರ ಧ್ವಜ ತಯಾರಿಸಲಾಗುತ್ತದೆ. ರಾಷ್ಟ್ರಧ್ವಜದಲ್ಲಿಅಶೋಕ ಚಕ್ರಕ್ಕೂ ಮೊದಲು ಚರಕ ಇತ್ತು. ಸ್ವಾವಲಂಬಿ ಸಂಕೇತವಾಗಿ ಚರಕ ಧ್ವಜದಲ್ಲಿ ಸ್ಥಾನ ಪಡೆದಿತ್ತು ಎಂದರು.

ಖಾದಿ ಉತ್ಪನ್ನಗಳಿಗೆ ಕೇಂದ್ರ, ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ, ರಿಯಾಯಿತಿ ನೀಡುತ್ತಿದೆ.
ಖಾದಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಲಭಿಸಬೇಕಿದೆ. ಈ ನಿಟ್ಟಿನಲ್ಲಿ ವಸ್ತು ಪ್ರದರ್ಶನ ಸಹಾಯಕವಾಗಿದೆ ಎಂದು ಹೇಳಿದರು.

ಖಾದಿ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೇಂದ್ರ ಸರ್ಕಾರ ಸ್ವದೇಶಿ ವಸ್ತುಗಳ ಉತ್ಪಾದನೆ, ಬಳಕೆಗೆ ಪ್ರೋತ್ಸಾಹ ನೀಡುವ ಮೂಲಕ ಸಾಕಷ್ಟು ಉದ್ಯೋಗವಾಶ ಸೃಷ್ಟಿಗೆ ಕಾರಣವಾಗಿದೆ. ಇದರಿಂದ ಭಾರತ ಮತ್ತಷ್ಟು ಬಲಿಷ್ಠವಾಗಲಿದ ಎಂದರು.

ಕಬ್ಬಿನ ಉಪ ಉತ್ಪನ್ನವಾದ ಈಥೇನಾಲ್‌ ಬಳಕೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಸದ್ಯ ಶೇ 10ರಷ್ಟು ಈಥೇನಾಲ್‌ ಅನ್ನು ಪೆಟ್ರೋಲ್‌ನಲ್ಲಿ ಬಳಸಲಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ಈಥೇನಾಲ್‌ ಮೂಲಕವೇ ವಾಹನಗಳು ಓಡಿಸಲಾಗುವುದು ಎಂದು ಹೇಳಿದರು.

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ,ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಅಧ್ಯಕ್ಷ ಕೆ.ವಿ.ನಾಗರಾಜ, ಮಂಡಳಿಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಾವಿತ್ರಮ್ಮ, ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಸಂಸ್ಥೆ(ಕೆಕೆಜಿಎಸ್‌) ಅಧ್ಯಕ್ಷ ಬಿ.ಬಿ.ಪಾಟೀಲ, ರಾಜಣ್ಣ ಇದ್ದರು.

****

15 ದಿನಖಾದಿ ಪ್ರದರ್ಶನ, ಮಾರಾಟ

ವಿಜಯಪುರ: ಬುಧವಾರದಿಂದ ಆರಂಭವಾಗಿರುವ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಅಕ್ಟೋಬರ್‌ 12ರ ವರೆಗೆ 15 ದಿನ ಇರಲಿದೆ.

35 ಖಾದಿ ಮಳಿಗೆ, 40 ಗ್ರಾಮೋದ್ಯೋಗ ಮಳಿಗೆ ಹಾಗೂ ಜಿಲ್ಲಾ ಪಂಚಾಯ್ತಿಯ 10 ಮಳಿಗೆಗಳು ಪ್ರದರ್ಶನದಲ್ಲಿ ಭಾಗವಹಿಸಿವೆ. ಪ್ರತಿ ದಿನ ಬೆಳಿಗ್ಗೆ 10ರಿಂದ ರಾತ್ರಿ 9.30ರ ವರೆಗೆ ಪ್ರದರ್ಶನ, ಮಾರಾಟ ಮೇಳ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.