
ವಿಜಯಪುರ: ‘ವಿಜಯಪುರಕ್ಕೆ 200 ಹೊಸ ಬಸ್ಗಳ ಬೇಡಿಕೆ ಇದ್ದು, ಪ್ರಥಮ ಹಂತದಲ್ಲಿ 66 ಹೊಸ ಬಸ್ಗಳನ್ನು ಒದಗಿಸಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಬಸ್ ಖರೀದಿ ಸ್ಥಗಿತವಾಗಿತ್ತು. ಆದರೆ, ಈಗ ಹೊಸ ಬಸ್ ಖರೀದಿ ಕಾರ್ಯ ಆರಂಭವಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾರ್ಯಾದೇಶ ನೀಡಲಾಗುವುದು’ ಎಂದರು.
ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಡಚಣದಲ್ಲಿ ಡಿಪೋ ಸ್ಥಾಪನೆಗೆ ಸಂಬಂಧಿಸಿದಂತೆ ಶಾಸಕರರು ಬೇಡಿಕೆ ಮಂಡಿಸಿದ್ದಾರೆ. ಈ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಸುರಕ್ಷಿತ ಪ್ರಯಾಣ ನಮ್ಮ ಗುರಿ, ಎಮೆರ್ಜೆನ್ಸಿ ಎಕ್ಸಿಟ್ ಗೇಟ್ ಅಳವಡಿಕೆ, ಓವರ್ ಲೋಡ್ಗೆ ಕಡಿವಾಣ ಹಾಕುವುದು ಸೇರಿದಂತೆ ಅನೇಕ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಲಾಗುತ್ತಿದೆ ಎಂದರು.
ಸಾರಿಗೆ ಇಲಾಖೆಯಲ್ಲಿ ಹುದ್ದೆಗಳ ಕೊರತೆ ಇತ್ತು, ಈ ಹುದ್ದೆಗಳ ಕೊರತೆಯನ್ನು ನೀಗಿಸಿ 75 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ, ಮಹಾರಾಷ್ಟ್ರ, ಪಾಂಡೇಚೇರಿ ಮೊದಲಾದ ಕಡೆಗಳಲ್ಲಿ ನೋಂದಣಿ ಮಾಡಿಸಿ ಕರ್ನಾಟಕದಲ್ಲಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡಲು ಹೇಳಲಾಗಿದೆ ಎಂದರು.
ಕೆಎಸ್ಆರ್ಟಿಸಿ ನೌಕರರ ಭತ್ಯೆ ವಿಷಯವಾಗಿ ಸಮಸ್ಯೆ ಇಲಾಖೆಯಲ್ಲಿದೆ. ಈ ಸಮಸ್ಯೆ ಬಗೆ ಹರಿದರೆ ಬಹುತೇಕ ಎಲ್ಲ ಸಮಸ್ಯೆಗಳನ್ನು ಬಗೆ ಹರಿದಂತಾಗುತ್ತದೆ, ಈ ಸಮಸ್ಯೆಯ ನಿವಾರಣೆಗಾಗಿ ಮತ್ತೊಮ್ಮೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುವೆ ಎಂದರು.
‘ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುತ್ತಿದೆ ಎಂಬ ತಪ್ಪು ಕಲ್ಪನೆಯನ್ನು ಬಿಜೆಪಿ ಜನರಲ್ಲಿ ಬಿತ್ತುತ್ತಿದೆ. ಆ ರೀತಿಯ ಪ್ರಮೇಯವಿಲ್ಲ’ ಎಂದರು.
‘ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ಎಂದರೆ ಬುರುಡೆ ಬಿಡುವ ಜನರ ಪಾರ್ಟಿ, ಸುಳ್ಳಿನ ಫ್ಯಾಕ್ಟರಿಯನ್ನೇ ಅವರು ನಡೆಸುತ್ತಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಮತ್ತು ಅಮೀತ್ ಶಾ ಪ್ರಿನ್ಸಿಪಾಲ್’ ಎಂದು ವ್ಯಂಗ್ಯವಾಡಿದರು.
‘ಮುಖ್ಯಮಂತ್ರಿ ಬದಲಾವಣೆ ವಿಷಯ ಹೈಕಮಾಂಡ್ಗೆ ಬಿಟ್ಟ ವಿಷಯ, ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏನು ಹೇಳಿದ್ದಾರೋ ಅದೇ ನನ್ನ ಹೇಳಿಕೆ’ ಎಂದು ಹೇಳಿದರು.
ಹೆರಿಟೇಜ್ ರನ್ ಪೋಸ್ಟರ್ ಬಿಡುಗಡೆ
ವಿಜಯಪುರ: ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಜಯಪುರ ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಡಿಸೆಂಬರ್ 7ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವೃಕ್ಷೋತ್ಥಾನ ಹೆರಿಟೇಜ್ ರನ್ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿದರು. ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಕರ್ನಾಟಕ ಕೌಶಲಾಭಿವೃದ್ದಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ ಸಾರಿಗೆ ಇಲಾಖೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ ಕೆಕೆಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಜಿಲ್ಲಾ ಉಸ್ತುವಾರಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಂತೇಶ ಬಿರಾದಾರ ಕೋಟಿ ವೃಕ್ಷ ಅಭಿಯಾನ ಪ್ರತಿಷ್ಠಾನದ ಮುರುಗೇಶ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.