ADVERTISEMENT

ತಿಕೋಟಾ: ಜೋರಾದ ಮಳೆ, ಗಾಳಿಗೆ ನೆಲಕ್ಕುರುಳಿದ ಕಬ್ಬು; ₹ 3 ಲಕ್ಷಕ್ಕೂ ಅಧಿಕ ಹಾನಿ

ಪರಮೇಶ್ವರ ಎಸ್.ಜಿ.
Published 11 ಅಕ್ಟೋಬರ್ 2021, 19:30 IST
Last Updated 11 ಅಕ್ಟೋಬರ್ 2021, 19:30 IST
ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಕೃಷ್ಣಪ್ಪ ಅಟಪಳಕರ ತೋಟದಲ್ಲಿ ರವಿವಾರ ರಾತ್ರಿ ಬೀಸಿದ ಗಾಳಿ ಮಳೆಗೆ ಕಬ್ಬು ನೆಲಕ್ಕುರುಳಿರುವುದು
ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಕೃಷ್ಣಪ್ಪ ಅಟಪಳಕರ ತೋಟದಲ್ಲಿ ರವಿವಾರ ರಾತ್ರಿ ಬೀಸಿದ ಗಾಳಿ ಮಳೆಗೆ ಕಬ್ಬು ನೆಲಕ್ಕುರುಳಿರುವುದು   

ತಿಕೋಟಾ: ಜೋರಾಗಿ ಬೀಸಿದ ಗಾಳಿ ಹಾಗೂ ಮಳೆಯಿಂದ ಕಬ್ಬು ಬೆಳೆ ನೆಲಕ್ಕುರುಳಿ ಅಂದಾಜು ₹ 3 ಲಕ್ಷಕ್ಕೂ ಅಧಿಕ ಹಾನಿಯಾಗಿದೆ.

ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಕೃಷ್ಣಪ್ಪ ಅಟಪಳಕರ ಎಂಬುವ ರೈತರ ತೋಟದಲ್ಲಿ ಕಟಾವಿಗೆ ಬಂದಿದ್ದ ಎರಡು ಎಕರೆಗೂ ಅಧಿಕ ಕಬ್ಬಿನ ಗದ್ದೆಯ ಬೆಳೆ ನೆಲಕಚ್ಚಿದೆ. ಸಾಲ ಮಾಡಿ ₹ 1.5 ಲಕ್ಷ ಖರ್ಚು ಮಾಡಿದ ಬೆಳೆಯೂ ₹ 2 ರಿಂದ 3 ಲಕ್ಷ ಆದಾಯ ಆಗುವಂತಿತ್ತು. ಆದರೆ ಭಾನುವಾರ ರಾತ್ರಿ ಸುರಿದ ಮಳೆಯಿಂದ ರೈತನ ಕಣ್ಣಲ್ಲಿ ನೀರು ತರಿಸುವಂತಾಗಿದೆ.

ಈ ಭಾಗದ ಬಹುತೇಕ ರೈತರು ದ್ರಾಕ್ಷಿ ಬೆಳೆಗಾರರು. ದ್ರಾಕ್ಷಿಗೆ ಖರ್ಚು ಅಧಿಕವಾಗಿರುದರಿಂದ ಕಡಿಮೆ ಕರ್ಚಿನ ಬೆಳೆ ಕಬ್ಬನ್ನು 2.5 ಎಕರೆಯಷ್ಟು ನಾಟಿ ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು.

ADVERTISEMENT

ಇದೇ ಗ್ರಾಮದ ಶಶಿಕಾಂತ ಗದ್ಯಾಳ ಎಂಬುವವರ ತೋಟದಲ್ಲಿಯೂ ಒಂದು ಎಕರೆ ಆಗುವಷ್ಟು ಕಬ್ಬು ನೆಲಕ್ಕುರುಳಿ ₹ 1.5 ಲಕ್ಷಕ್ಕೂ ಅಧಿಕ ಹಾನಿಯಾಗಿದೆ. ಕಬ್ಬಿನ ಬೆಳೆಗೆ ಗೊಬ್ಬರ ಹಾಕಿ ನೀರುಣಿಸಿ ಉತ್ತಮ ವ್ಯವಸ್ಥೆ ಮಾಡಿದ್ದರಿಂದ ಎತ್ತರವಾಗಿ ಬೆಳೆದಿತ್ತು. ಮಳೆ ಬಂದು ಅತಿ ತಂಪಾಗಿ ಹಾಗೂ ಜೋರು ಗಾಳಿ ಬೀಸಿದ್ದರಿಂದ ಕಬ್ಬಿನ ಪಡ ವಾಲಿ ನೆಲಕ್ಕಚ್ಚಿದೆ.

ಪ್ರತಿ ವರ್ಷ ಈ ಭಾಗದ ರೈತರಿಗೆ ಒಂದಲ್ಲ ಒಂದು ತೊಂದರೆ ಉಂಟಾಗಿ ಹಾನಿಯಾಗುತ್ತಲೇ ಇದೆ. ಮೊದಲು ನೀರಿಲ್ಲದೇ ಬರಗಾಲದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಕೊಂಡು ತಂದು ಬೆಳೆಗಳಿಗೆ ಹಾಕುತಿದ್ದರು. ಆಗ ಸಾಲ ಮಾಡಿ ಬೆಳೆ ಉಳಿಸಿಕೊಂಡರೂ, ಉತ್ತಮ ಆದಾಯ ಇರಲಿಲ್ಲ. ಎರಡು ವರ್ಷದಿಂದ ಉತ್ತಮ ಮಳೆ ಹಾಗೂ ಕಾಲುವೆ ನೀರಿನ ನೆರವಿನಿಂದ ಉತ್ತಮ ಬೆಳೆ ಬಂದಿತ್ತು. ಈ ವರ್ಷ ಮಳೆಗೆ ಅನ್ನದಾತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹುಬನೂರ, ಟಕ್ಕಳಕಿ, ಘೋಣಸಗಿ, ಬಾಬಾನಗರ, ಸೋಮದೇವರಹಟ್ಟಿ ಭಾಗಗಳಲ್ಲಿ ಜೋರಾದ ಮಳೆ ಹಾಗೂ ಗಾಳಿ ಬೀಸಿದೆ. ಕೆಲವು ರೈತರ ತೋಟದಲ್ಲಿ ತೊಗರಿ ಬೇಳೆ ಮಳೆ ನೀರಿನಿಂದ ಹಾನಿಯಾಗಿದೆ. ಹಾನಿಯಾದ ರೈತರ ತೋಟಗಳಿಗೆ ಗ್ರಾಮ ಲೆಕ್ಕಾಧಿಕಾರಿ ಎಂ.ಬಿ.ಖಾಜಿ, ಸಹಾಯಕ ಕೃಷಿ ಅಧಿಕಾರಿ ಎ‌.ಬಿ‌.ಪಾಟೀಲ ಭೇಟಿ ನೀಡಿ ವರದಿ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.