ADVERTISEMENT

ದೇವರಹಿಪ್ಪರಗಿ: ಒಣಮೇವು ಸಂಗ್ರಹದತ್ತ ರೈತರ ಚಿತ್ತ, ಜೋಳದ ಮೇವುಗೆ ಹೆಚ್ಚು ಬೇಡಿಕೆ

ಅಮರನಾಥ ಹಿರೇಮಠ
Published 9 ಏಪ್ರಿಲ್ 2023, 19:30 IST
Last Updated 9 ಏಪ್ರಿಲ್ 2023, 19:30 IST
ದೇವರ ಹಿಪ್ಪರಗಿ ತಾಲ್ಲೂಕಿನ ರೈತರು ತಾವು ಖರೀದಿಸಿದ ಒಣಮೇವನ್ನು ಟ್ರ್ಯಾಕ್ಟರ್ ಮೂಲಕ ತಮ್ಮ ಗ್ರಾಮಗಳಿಗೆ ಸಾಗಿಸುತ್ತಿರುವುದು.
ದೇವರ ಹಿಪ್ಪರಗಿ ತಾಲ್ಲೂಕಿನ ರೈತರು ತಾವು ಖರೀದಿಸಿದ ಒಣಮೇವನ್ನು ಟ್ರ್ಯಾಕ್ಟರ್ ಮೂಲಕ ತಮ್ಮ ಗ್ರಾಮಗಳಿಗೆ ಸಾಗಿಸುತ್ತಿರುವುದು.   

ದೇವರಹಿಪ್ಪರಗಿ: ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ತೊಗರಿ ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಿದ್ದು, ಪ್ರಮುಖ ಆಹಾರಬೆಳೆ ಜೋಳದ ಬಿತ್ತನೆ ಕಡಿಮೆಯಾಗಿದೆ. ಇದರಿಂದ ಜಾನುವಾರಗಳಿಗೆ ಮೇವು ಕೊರತೆ ಕಾಡಲಾರಂಭಿಸಿದೆ. ಒಣಮೇವು ಕೊರತೆ ನೀಗಿಸುವ ನಿಟ್ಟಿನಲ್ಲಿ ರೈತ ಸಮುದಾಯ ಒಣಮೇವು ಸಂಗ್ರಹದತ್ತ ಚಿತ್ತ ಹರಿಸಿದೆ.

ಜೋಳ ಬಿತ್ತನೆಯಾಗುವ ಡೋಣಿ ತೀರದ ಪ್ರಮುಖ ಗ್ರಾಮಗಳ ಎರೆಭೂಮಿ ಜಮೀನುಗಳಲ್ಲಿ ತೊಗರಿ ಮತ್ತು ಹತ್ತಿ ಕಂಡು ಬರುತ್ತಿದೆ. ಇದರಿಂದ ಪ್ರಮುಖ ಆಹಾರ ಬೆಳೆ ಜೋಳ ಹಾಗೂ ಒಣಮೇವಿನ ಕೊರತೆ ಕಾಡಲಾರಂಭಿಸಿದೆ. ಇದರಿಂದ ಜಾನುವಾರುಗಳಿಗೆ ಮೇವು ಒದಗಿಸಲು ಪರದಾಡುವಂತಾಗಿದೆ.

ಹೌದು! ಇದು ಅಕ್ಷರಶಃ ಇಂದು ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಜಾನುವಾರುಗಳಿಗೆ ಬರುವ ಬೇಸಿಗೆಗಾಗಿ ಅಗತ್ಯವಾದ ಒಣಮೇವನ್ನು ದೂರದ ಗ್ರಾಮಗಳಿಂದ ಖರೀದಿಸಿ ಟ್ರ್ಯಾಕ್ಟರ್ ಗಳ ಮೂಲಕ ತಂದು ಸಂಗ್ರಹಿಸಲಾಗುತ್ತಿದೆ. ಆಕಳು, ಎತ್ತು, ಎಮ್ಮೆಗಳಿಗೆ ಅಗತ್ಯವಾದ ಜೋಳದ ಮೇವು ಈಗ ಸ್ಥಳೀಯವಾಗಿ ದೊರೆಯದ ಹಿನ್ನೆಲೆಯಲ್ಲಿ ಒಣಮೇವಿನ ಎರಡು ಟ್ರ್ಯಾಲಿಗೆ ಮೂವತ್ತೆಂಟು ಸಾವಿರ ಹಣ ನೀಡಿ ರೈತರು ಕೊಳ್ಳುತ್ತಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಇಂಡಿ ತಾಲ್ಲೂಕಿನ ಆಹಿರಸಂಗ ಗ್ರಾಮದ ರೈತರಾದ ಶರಣಪ್ಪ ಮಲ್ಲಪ್ಪ ರೂಗಿ ಹಾಗೂ ಗುರುನಾಥ ಪತ್ತಾರ, ಒಂದು ಟ್ರ್ಯಾಲಿ ಜೋಳದ ಒಣಮೇವು 10 ಜಾನುವಾರುಗಳಿಗೆ ಮೂರು ತಿಂಗಳು ಸಾಲುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಹಸಿಮೇವು ಸಿಗುವುದು ದೂರದ ಮಾತು. ನಮ್ಮ ಜಮೀನುಗಳಲ್ಲಿ ಈಗ ದ್ರಾಕ್ಷಿ ಬೆಳೆಯಲಾಗುತ್ತಿದೆ. ಒಣಮೇವು ನಮಗೆ ಅನಿವಾರ್ಯ, ಮುಂದಿನ ಮಳೆಗಾಲದವರೆಗೆ ಅಗತ್ಯವಾದ ಮೇವನ್ನು ನಾವು ಮಾರ್ಕಬ್ಬಿನಹಳ್ಳಿ ಗ್ರಾಮದಿಂದ ಖರೀದಿಸಿ ಸಂಗ್ರಹಿಸುತ್ತಿದ್ದೇವೆ. ಈಗಾಗಲೇ ₹76 ಸಾವಿರ ನೀಡಿ ನಾಲ್ಕು ಟ್ರ್ಯಾಕ್ಟರ್ ಮೇವು ತಂದಿದ್ದೇವೆ. ಈ ಮೇವು ಮುಂದಿನ ಮಳೆಗಾಲದವರೆಗೆ ಸಾಲಬಹುದು ಎಂಬ ಭರವಸೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವರ್ಷದಿಂದ ವರ್ಷಕ್ಕೆ ಜೋಳ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಜೋಳ ಹಾಗೂ ಒಣಮೇವಿನ ಅಭಾವ ಎದ್ದು ಕಾಣುತ್ತಿದೆ. ಅದರಲ್ಲೂ ನಮ್ಮ ಜಿಲ್ಲೆಯಲ್ಲಿ ಈಗೀಗ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುವವರೇ ಹೆಚ್ಚಾಗುತ್ತಿದ್ದಾರೆ. ಮಳೆಗಾಲದಲ್ಲಿ ಹಸಿರು ಮೇವಿಗೆ ಕೊರತೆಯಿಲ್ಲ. ಆದರೆ, ಬೇಸಿಗೆಯಲ್ಲಿ ದನಕರುಗಳು ಮೇವಿಗಾಗಿ ಅಲೆಯಬೇಕಾಗುತ್ತದೆ. ಆದ್ದರಿಂದ ಬಹುತೇಕ ರೈತರು ತಮ್ಮಲ್ಲಿಯ ದನಕರುಗಳನ್ನು ಮಾರಲು ಮುಂದಾಗುತ್ತಾರೆ. ಇನ್ನೂ ಕೆಲ ನಮ್ಮಂಥ ರೈತರು ಮುಂಜಾಗ್ರತಾ ಕ್ರಮ ತೆಗೆದುಕೊಂಡು ಮೊದಲೇ ಮೇವು ಸಂಗ್ರಹಣೆಗೆ ಮುಂದಾಗುತ್ತೇವೆ ಎನ್ನುತ್ತಾರೆ ಅದೇ ಗ್ರಾಮದ ಭಾಷಾಸಾಬ್ ಶೇಖ್ ಹಾಗೂ ಪ್ರಭು ಪೂಜಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.