
ತಾಳಿಕೋಟೆ: ತಾಲ್ಲೂಕಿನ ಚಬನೂರ ಗ್ರಾಮದ ರಾಮಲಿಂಗೇಶ್ವರ ಮಠದ ಧರ್ಮಾಧಿಕಾರಿಯನ್ನಾಗಿ ರಾಮಲಿಂಗಯ್ಯ ಸ್ವಾಮೀಜಿಯವರನ್ನು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಭಾನುವಾರ ಘೋಷಿಸಿದರು.
ಗ್ರಾಮದ ರಾಮಲಿಂಗೇಶ್ವರ ನೂತನ ಮಠದ ಹಾಗೂ ಸಭಾಭವನದ ಉದ್ಘಾಟನೆ ನಂತರ , ಶ್ರೀಮಠದ ರಾಮಲಿಂಗಯ್ಯ ಸ್ವಾಮೀಜಿಗೆ ಮಂಗಲಸ್ನಾನ ನೆರವೇರಿಸಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಉಜ್ಜಯಿನಿಶ್ರೀ ಅವರು, ರಾಮಲಿಂಗೇಶ್ವರ ಮಠವು ಉಜ್ಜಯಿನಿ ಮಠದ ಶಾಖಾ ಮಠವಾಗಿದೆ. ಈ ಮಠಕ್ಕೆ ಬ್ರಹ್ಮಚಾರಿ ಉತ್ತರಾಧಿಕಾರಿ ಸಿಗುವವರೆಗೂ ಸದ್ಯದ ಗ್ರಹಸ್ಥ ರಾಮಲಿಂಗಯ್ಯ ಸ್ವಾಮೀಜಿಯವರೇ ಧರ್ಮಾಧಿಕಾರಿಯಾಗಿ ಮಠವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ. ಚಬನೂರ ರಾಮಲಿಂಗೇಶ್ವರ ಮಠ ವಿರಕ್ತಮಠವಾಗಲಿದೆ. ಪಟ್ಟಾಧೀಶರಲ್ಲದ ಸ್ವಾಮೀಜಿಗಳಲ್ಲಿ ಮಂಗಲಸ್ನಾನ ಮಾಡಿಕೊಂಡವರು ಇವರೇ ಮೊದಲಿಗರಾಗಿದ್ದಾರೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಬೆಳಗಿನ ಜಾವ ರಾಮಲಿಂಗೇಶ್ವರರ ಪ್ರತಿಷ್ಠಾಪನಾ ಕಾರ್ಯವನ್ನು ಉಜ್ಜಯಿನಿಶ್ರೀ ನೆರವೇರಿಸಿದರೆ, ನೂತನ ಕಲ್ಯಾಣ ಮಂಟಪ, ಪ್ರಸಾದ ನಿಲಯವನ್ನು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಉದ್ಘಾಟಿಸಿದರು.
ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಇತರ ಶ್ರೀ ಮಾತನಾಡಿದರು.
ಮಾಗಣಗೇರಿ ಶ್ರೀ, ಕಡಕೋಳ ಮಡಿವಾಳೇಶ್ವರ ಮಠದ ರುದ್ರಮುನಿ ಶಿವಾಚಾರ್ಯರು, ನೂತನಮಠದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ, ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ನಾವದಗಿ ಹಿರೇಮಠದ ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಸ್ವಾಮೀಜಿ, ದೇವರ ಹಿಪ್ಪರಗಿ ಪರದೇಶಿಮಠದ ಶಿವಯೋಗಿ ಸ್ವಾಮೀಜಿ, ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿ, ಜಡಿಮಠದ ಜಡಿಸಿದ್ದೇಶ್ವರ ಸ್ವಾಮೀಜಿ, ದೇವದುರ್ಗಶ್ರೀ, ಕವಿತಾಳಶ್ರೀ, ಕೋರವಾರಶ್ರೀ, ಶಿರಶ್ಯಾಡಶ್ರೀ, ಬಸನಗೌಡ ಪಾಟೀಲ(ಚಬನೂರ), ಮೊದಲಾದವರಿದ್ದರು.
ಶನಿವಾರ ಉಜ್ಜಯಿನಿಶ್ರೀ ಅವರ ಅಡ್ಡಪಲ್ಲಕ್ಕಿ ಮಹೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.