ADVERTISEMENT

ಜಂಬೂಸವಾರಿಯಲ್ಲಿ ಹೆಜ್ಜೆಮೇಳ:ಉ.ಕರ್ನಾಟಕದ ಗ್ರಾಮೀಣ ಜಾನಪದ ಕಲೆ ಪರಿಚಯಿಸಲಿರುವ ತಂಡ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 7:38 IST
Last Updated 1 ಅಕ್ಟೋಬರ್ 2025, 7:38 IST
ಮೈಸೂರು ದಸರಾದಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಮುದ್ದೇಬಿಹಾಳ ತಾಲ್ಲೂಕಿನ ಯರಝರಿ ಜಾನಪದ ಹೆಜ್ಜೆಮೇಳ ತಂಡ 
ಮೈಸೂರು ದಸರಾದಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಮುದ್ದೇಬಿಹಾಳ ತಾಲ್ಲೂಕಿನ ಯರಝರಿ ಜಾನಪದ ಹೆಜ್ಜೆಮೇಳ ತಂಡ    

ಮುದ್ದೇಬಿಹಾಳ: ತಾಲ್ಲೂಕಿನ ಹೆಜ್ಜೆಮೇಳ ತಂಡವು ಈ ಬಾರಿಯ ಮೈಸೂರು ದಸರಾ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಜಾನಪದ ಕಲೆಯನ್ನು ನಾಡಿಗೆ ಪರಿಚಯಿಸಲಿದೆ.

ತಾಲ್ಲೂಕಿನ ಯರಝರಿಯ ಜಾನಪದ ಹೆಜ್ಜೆಮೇಳ ಸಂಘವು ಅಕ್ಟೋಬರ್‌ 2ರಂದು ವಿಶ್ವವಿಖ್ಯಾತ ದಸರಾದಲ್ಲಿ ಜಂಬೂ ಸವಾರಿ ಮಹೋತ್ಸವ ಭಾಗಿಯಾಗಲಿದೆ. ಸಂಘಕ್ಕೆ ಮೈಸೂರು ದಸರಾ ಪಂಜಿನ ಕವಾಯತು ಉಪ ಸಮಿತಿಯ ಉಪ ಅಧಿಕಾರಿ ಸೀಮಾ ಲಾಟ್ಕರ್ ಆಹ್ವಾನ ನೀಡಿದ್ದಾರೆ.

ಹೆಜ್ಜೆ ಮೇಳದ ವಿಶೇಷತೆ: ‘ಹಲಗೆ ವಾದನ, ಸಾಂಪ್ರದಾಯಿಕ ವಾದ್ಯಗಳ ಮೂಲಕ ಒಟ್ಟು 22 ಜನರ ತಂಡ ಮೇಳದಲ್ಲಿ ಇರಲಿದೆ. ಯರಝರಿ ಗ್ರಾಮದವರೇ ಈ ಮೇಳದಲ್ಲಿರುವುದು ವಿಶೇಷ. 10 ವರ್ಷಗಳಿಂದ ನಮ್ಮ ತಂಡ ಹಲವೆಡೆ ಪ್ರರ್ದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಹೆಜ್ಜೆ ಮೇಳದ ತಂಡದ ಅಧ್ಯಕ್ಷ ಭೀಮಸೇನ ಕೋಳೂರು ತಿಳಿಸಿದರು.

ADVERTISEMENT

ಮೇಳದ ಧಿರಿಸು: ‘ಅಪ್ಪಟ ಉತ್ತರ ಕರ್ನಾಟಕ ಭಾಗದ ಉಡುಪನ್ನು ಹೆಜ್ಜೆಮೇಳದ ಕಲಾವಿದರು ಧರಿಸುತ್ತಾರೆ. ತಲೆಗೆ ರೇಶ್ಮೆ ಪಟಗ, ಬಿಳಿ ಧೋತ್ರ, ಅಂಗಿ ಧರಿಸುತ್ತಾರೆ. ಕೈಯಲ್ಲಿ ಕೋಲುಗಳನ್ನು ಹಿಡಿದು ಹಲಗೆಯ ತಾಳಬದ್ದ ನಿನಾದಕ್ಕೆ ಹೆಜ್ಜೆ ಹಾಕುತ್ತಾರೆ’ ಎಂದರು.

‘ಮರೆಯಾಗುತ್ತಿರುವ ಗ್ರಾಮೀಣ ಕಲೆಗಳನ್ನು ಉಳಿಸುವುದಕ್ಕೆ ಕನ್ನಡ ಜಾನಪದ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಾಹಿತ್ಯಿಕ ಸಂಘಟನೆಗಳು ಶ್ರಮಿಸುತ್ತಿವೆ. ಯರಝರಿಯ ಹೆಜ್ಜೆಮೇಳವು ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರದರ್ಶನವಾಗುತ್ತಿರುವುದು ತಾಲ್ಲೂಕಿನ ಗೌರವವನ್ನು ಇಮ್ಮಡಿಸಿಗೊಳಿಸಿದಂತಾಗಿದೆ’ ಎಂದು ಹೇಳಿದರು. 

‘ಇಡೀ ಭಾರತ ಪ್ರದರ್ಶನ ನೋಡುವ ಖುಷಿ’
‘ಏಳೆಂಟು ವರ್ಷಗಳಿಂದ ಮೈಸೂರು ದಸರಾದಲ್ಲಿ ಭಾಗಿಯಾಗಲು ನಮ್ಮ ಭಾಗದ ಕಲಾವಿದರಿಗೆ ಅವಕಾಶ ಸಿಕ್ಕಿರಲಿಲ್ಲ. ಉಸ್ತುವಾರಿ ಸಚಿವ  ಎಂ.ಬಿ. ಪಾಟೀಲ ಜಿಲ್ಲಾಧಿಕಾರಿ ಕೆ.ಆನಂದ ಶಾಸಕರಾದ ಸಿ.ಎಸ್.ನಾಡಗೌಡ ಅವರ ಶಿಫಾರಸ್ಸಿನ ಮೇರೆಗೆ ನಮ್ಮ ಕಲಾ ತಂಡ ಜಂಬೂಸವಾರಿ ಮೆರವಣಿಗೆಗೆ ಆಯ್ಕೆಯಾಗಿದೆ. ಈ ಮೂಲಕ ಇಡೀ ದೇಶವೇ ನಮ್ಮ ಕಲಾ ತಂಡದ ಪ್ರದರ್ಶನ ನೋಡುವಂತಾಗುತ್ತದೆ’ ಸಂಘದ ಕಾರ್ಯದರ್ಶಿ ಎಂ.ಎಸ್.ಕನ್ನೂರು ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.