
ಸಿಂದಗಿ: ನಾಡಗೀತೆಗೆ ನೂರರ ಸಂಭ್ರಮ. ಹೀಗಾಗಿ ಸಿಂದಗಿ-ಆಲಮೇಲ-ದೇವರಹಿಪ್ಪರಗಿ ಮೂರು ತಾಲ್ಲೂಕುಗಳ 640 ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ನಾಡಗೀತೆಯನ್ನು ಸುಶ್ರಾವ್ಯವಾಗಿ, ರಾಗಬದ್ಧವಾಗಿ ಹಾಗೂ ನಿಗದಿತ ಸಮಯಕ್ಕೆ ಪೂರ್ಣಗೊಳ್ಳುವ ತರಬೇತಿಯನ್ನು ನೀಡಲು ಪಟ್ಟಣದ ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಪ್ರಕಾಶ ಮೂಡಲಗಿ ಮುಂದಾಗಿದ್ದಾರೆ.
ಮೂಡಲಗಿ ಅವರು ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಅನುಮತಿ ಪಡೆದುಕೊಂಡು ತಮ್ಮ ಸ್ವಂತ ಖರ್ಚಿನಿಂದ ದಿನಕ್ಕೆ 2-3 ಶಾಲೆಗಳಿಗೆ ಹೋಗಿ ನಾಡಗೀತೆಯ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ 10 ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
‘ವಿದ್ಯಾರ್ಥಿಗಳಲ್ಲಿ ನಾಡಗೀತೆ ಬಗ್ಗೆ ಅಭಿಮಾನ ಮೂಡಿಸುವ ಜೊತೆಗೆ ನಾಡಗೀತೆಯನ್ನು ರಾಗಬದ್ಧವಾಗಿ ಹಾಡಿಸುವ ಉದ್ದೇಶ ನನ್ನದಾಗಿದೆ. ಇದನ್ನು ನಾನು ಸ್ವಯಂಪ್ರೇರಣೆಯಿಂದ ಸೇವಾ ಕಾರ್ಯ ಎಂದು ಮಾಡುತ್ತಿರುವೆ.
ವಿದ್ಯಾರ್ಥಿಗಳು ನಾಡಗೀತೆಯನ್ನು ಶಿಸ್ತುಬದ್ಧವಾಗಿ ಹಾಡುವದನ್ನು ಕಲಿತರೆ ನನ್ನ ಶ್ರಮ ಸಾರ್ಥಕವಾಗುತ್ತದೆ’ ಎಂದು ಪ್ರಕಾಶ ಮೂಡಲಗಿ 'ಪ್ರಜಾವಾಣಿ' ಗೆ ತಿಳಿಸಿದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ರಾಗ ರಂಜಿನಿ ಸಂಗೀತ ಅಕಾಡೆಮಿ ಸಂಚಾಲಕರು ಶಾಲೆ-ಶಾಲೆಗೆ ತೆರಳಿ ವಿದ್ಯಾರ್ಥಿಗಳಲ್ಲಿ ನಾಡಪ್ರೇಮ ಬಿಂಬಿಸುವ ನಾಡಗೀತೆಯನ್ನು ಹೇಗೆ ಹಾಡಬೇಕು ಎಂಬ ತರಬೇತಿ ನೀಡುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.